Saturday, March 30, 2013

ಬಡ್ಡಿವ್ಯಾಪಾರಿಗಳ ಕಥೆಗಳು

ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.


ಗ್ರಾಮೀಣ ಪ್ರಾಂತದಲ್ಲಿ ಅನೇಕ ವರ್ಷಗಳಿಂದ ಓಡಾಡುತ್ತಿರುವ ನನಗೆ ಒಬ್ಬ ಬಡ್ಡಿವ್ಯಾಪಾರಿಯೂ ಕಂಡಿಲ್ಲ. ಕಿರಾಣೆಯಂಗಡಿಯವರನ್ನು, ಸರಪಂಚರನ್ನೂ, ಗ್ರಾಮ ಲೆಕ್ಕಿಗನನ್ನು, ದೇವಸ್ಥಾನದ ಅರ್ಚಕರನ್ನೂ, ಸ್ಕೂಲು ಮಾಸ್ತರುಗಳನ್ನೂ ಭೇಟಿಯಾಗಿರುವ ನನಗೆ ಯಾರೂ, ’ನಾನು ಈ ಗ್ರಾಮದ ಬಡ್ಡಿವ್ಯಾಪಾರಿ’ ಎಂದು ಪರಿಚಯಿಸಿಕೊಂಡ ಕಾರ್ಡು ಕೊಟ್ಟ ಅನುಭವವಿಲ್ಲ. ಹಾಗೆಂದು ಬಡ್ಡಿವ್ಯಾಪಾರಿಗಳು ನಮ್ಮ ಊಹೆಯಲ್ಲಿ ಮಾತ್ರವಿರುವ ರಾಕ್ಷಸರು ಎಂದು ನಾನೇನೂ ವಾದಿಸ ಹೊರಟಿಲ್ಲ. ಆದರೆ ಬಡ್ಡಿವ್ಯಾಪಾರಿಗಳು ತಮ್ಮ ಸಮಾಜದಲ್ಲಿ ಯಾವ ಭೂಮಿಕೆಯನ್ನು ನಿರ್ವಹಿಸುತ್ತಿರಬಹುದು ಅನ್ನುವ ಕುತೂಹಲವನ್ನು ನಾವು ಪರಿಹರಿಸಿಕೊಳ್ಳಲು ಸಾಧ್ಯವಾಗಬಹುದೇ? ಈಗಲೂ ಸ್ವ-ಸಹಾಯ ಗುಂಪುಗಳಲ್ಲಿ ಶಾಮೀಲಾಗಿರುವ ಮಹಿಳೆಯರನ್ನು ಮಾತನಾಡಿಸಿದರೆ ಅವರುಗಳು ಬಡ್ಡಿವ್ಯಾಪಾರಿಗಳಿಂದ ಸಾಲ ಪಡೆಯುತ್ತಿದ್ದ, ಅದಕ್ಕೆ ಅವರುಗಳು ಕಟ್ಟುತ್ತಿದ್ದ ಬಡ್ಡಿಯ ಕಥೆಗಳನ್ನು ನಮಗೆ ಕಣ್ಣೀರು ಬರುವಂತೆ ವಿವರಿಸುತ್ತಾರೆ.

ಬಡ್ಡಿವ್ಯಾಪಾರಿಗಳು ಇಷ್ಟು ದುಷ್ಟರಾದರೆ ಅವರು ಹೇಗೆ ಇನ್ನೂ ವ್ಯಾಪಾರವನ್ನು ನಡೆಸುತ್ತಿದ್ದಾರೆ? ಅವರು ಬಡ್ಡಿವ್ಯಾಪಾರದಿಂದ ಅಷ್ಟೊಂದು ಹಣವನ್ನು ಸಂಪಾದಿಸುವುದೇ ಆಗಿದ್ದರೆ ನಮಗೆ ಗ್ರಾಮೀಣ ಪ್ರಾಂತದಲ್ಲಿ ಈ ವ್ಯಾಪಾರ ಮಾಡಿ ದೊಡ್ಡ ವ್ಯಾಪಾರಿಯಾಗಿ ಒಂದು ಬ್ಯಾಂಕಿನ/ಕಂಪನಿಯ ಸ್ಥರಕ್ಕೆ ಬೆಳೆದ ಬಡ್ಡಿವ್ಯಾಪಾರಿಗಳು ಯಾಕೆ ಕಾಣಸಿಗುವುದಿಲ್ಲ? ಈ ರೀತಿಯ ಪ್ರಶ್ನೆಗಳನ್ನು ನಾವು ಪರೀಕ್ಷಿಸಿದಾಗ ನಮಗೆ ಸಮಾಜದಲ್ಲಿ ಬಡ್ಡಿವ್ಯಾಪಾರಿಗಳ ಪಾತ್ರದ ಬಗೆಗಿನ ವಿವಿಧ ಪದರಗಳು ಕಾಣಸಿಗಬಹುದೇನೋ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಂಶೋಧನೆಯನ್ನಲ್ಲದೇ ಸಾಹಿತ್ಯದ ಪರಿಕರಗಳನ್ನೂ ಬಳಸಿಕೊಳ್ಳುತ್ತೇನೆ.

ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಫೆಲೊ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ ರೆಡ್ಡಿ ಅನಂತಪುರದ ಒಬ್ಬ ಬಡ್ಡಿವ್ಯಾಪಾರಿಯ ಲೆಕ್ಕದ ಪುಸ್ತಕಗಳನ್ನು ತಂದು ಅದನ್ನು ವಿಶ್ಲೇಷಿಸಿದ್ದರು. ದುರಾದೃಷ್ಟವಶಾತ್ ಆ ಸಂಶೋಧನೆ ಪೂರ್ಣಗೊಳ್ಳುವುದಕ್ಕೆ ಮೊದಲೇ ಸೋಮ್ ಹೃದಯಾಘಾತಕ್ಕೀಡಾದರು. ಆದರೂ ಸೋಮ್ ಬರೆದಿದ್ದ ಪೇಪರಿನ ಮೊದಲ ಆವೃತ್ತಿಯಿಂದ ಕೆಲವಾರು ಕುತೂಹಲಕಾರಿ ವಿಷಯಗಳು ನಮಗೆ ವೇದ್ಯವಾಗುತ್ತವೆ. ಅವರ ವರದಿಯಿಂದ [ಇದು ಅನಂತಪುರ ಜಿಲ್ಲೆಗೆ ಸಂಬಂಧಿಸಿದ ಒಂದು ಗ್ರಾಮದ ಕಥೆ, ಹೀಗಾಗಿ ಇದು ಎಲ್ಲೆಡೆ ವರ್ತಿಸುತ್ತದೆ ಎಂದು ನಾವು ನಂಬುವುದು ಅಸಮರ್ಪಕವಾಗುತ್ತದೆ] ನಮಗೆ ತಿಳಿಯುವುದೆಂದರೆ ಅಲ್ಲಿನ ಬಡ್ಡಿವ್ಯಾಪಾರಿಗಳು ಬರೇ ಬಡ್ಡಿವ್ಯಾಪಾರಿಗಳಾಗಿರದೇ ಮಿಕ್ಕ ವ್ಯಾಪಾರಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರುಗಳು ಸಾಲ ನೀಡುತ್ತಿದ್ದುದ್ದು ತಮಗೆ ತಿಳಿದ ತಮ್ಮೊಂದಿಗೆ ಯಾವುದಾದರೂ ಆರ್ಥಿಕ ಸಂಬಂಧವಿದ್ದ ಸಂಸಾರಗಳಿಗೆ ಮಾತ್ರ. ಮಿಕ್ಕವರು ಇನ್ನೆಲ್ಲಾದರೂ ಸಾಲವನ್ನು ಪಡೆಯುತ್ತಿದ್ದರು. ಈ ಕಥೆಯೂ ನಮಗೆ ತಿಳಿದದ್ದೇ. ಆದರೆ ಬಡ್ಡಿ ವ್ಯಾಪಾರಿಗಳು ತಮ್ಮ ಸಾಲಗಾರರನ್ನು ಯಾವ ಯಾವ ರೀತಿಯಲ್ಲಿ ಹೀರಲು ಸಾಧ್ಯವೋ ಆ ಎಲ್ಲರೀತಿಯಲ್ಲೂ ಹೀರಲು ತಯಾರಿರುತ್ತಾರೆ ಅನ್ನುವ ಕಥೆಗಳನ್ನು ನಾವು ಕೇಳಿಯೇ ಇದ್ದೇವೆ.

ಆದರೆ ಸೋಮ್ ಅಧ್ಯಯನದಲ್ಲಿ ನಮಗೆ ಕಾಣಿಸುವ ಅತ್ಯಂತ ಮಹತ್ವದ ವಿಷಯವೆಂದರೆ ಈ ಬಡ್ಡಿವ್ಯಾಪಾರಿಗಳು ತಮ್ಮ ಸಾಲಗಾರರಿಗೆ ಎಷ್ಟು ಸಾಲ ನೀಡುತ್ತಿದ್ದರು ಅನ್ನುವ ಅಂಕಿ. ಅವರು ಅಧ್ಯಯನ ಮಾಡಿರುವ ೧೫೦೦ ಸಾಲಗಳಲ್ಲಿ ರೂ.೧೦,೦೦೦ ದಾಟಿದ ಸಾಲಗಳು ಕೇವಲ ಎರಡು. ರೂ. ೫೦ಕ್ಕೂ ಕಡಿಮೆ ಸಾಲ ಕೊಟ್ಟಿರುವುದು ೪೪೨ ಬಾರಿ. ಅರ್ಥಾತ್: ಈ ಸಾಲಗಳನ್ನು
ಬಡ್ಡಿವ್ಯಾಪಾರಿಯಲ್ಲದೇ ಬೇರೆ ಯಾರಾದರೂ ನೀಡಲು ಸಾಧ್ಯವಿತ್ತೇ? ಒಂದು ರೀತಿಯಲ್ಲಿ ಗ್ರಾಮೀಣ ಬಡ್ಡಿವ್ಯಾಪಾರಿ ಬಡವರ ಕ್ರೆಡಿಟ್ ಕಾರ್ಡಿನಂತೆ ವರ್ತಿಸುತ್ತಿದ್ದಾನೆ ಅನ್ನಿಸುವುದಿಲ್ಲವೇ? ಅಂದ ಹಾಗೆ ಕ್ರೆಡಿಟ್ ಕಾರ್ಡಿನ ಸಾಲಕ್ಕೆ ನಾವು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಎರಡು/ಮೂರು ಪ್ರತಿಶತ ಬಡ್ಡಿ ಪಡೆವ ಗ್ರಾಮೀಣ ಬಡ್ಡಿವ್ಯಾಪಾರಿ ಅಷ್ಟೇನೂ ದುಷ್ಟನಾಗಿ ಕಾಣುವುದಿಲ್ಲ.


ಸತ್ಯಂ ಶಂಕರ ಮಂಚಿ ಅನ್ನುವ ಲೇಖಕರ ಅದ್ಭುತ ಪುಸ್ತಕ ’ಅಮರಾವತಿ ಕಥಲು’ವಿನಲ್ಲಿ ಒಂದು ’ಬಾಕೀ ಸಂತಾನ’ ಅನ್ನುವ ಕಥೆಯಿದೆ. ರಂಗಯ್ಯ ಅನ್ನುವ ಬಡರೈತನ ಮೇಲೆ ತನ್ನ ತಂದೆ ಮಾಡಿದ ಸಾಲದ ಭಾರವಿದೆ. ಅದನ್ನು ವಸೂಲು ಮಾಡಲು ಅವನಿಗೆ ಸಾಲ ನೀಡಿದ ಮಾಸ್ತರು ಅವನ ದನವನ್ನು ತಂದು ತಮ್ಮ ಮನೆಯಲ್ಲಿ ಕಟ್ಟಿಹಾಕುತ್ತಾರೆ. ರಂಗಯ್ಯ ಸಿಟ್ಟಿನಿಂದ ಮಾಸ್ತರನ್ನು ಕೊಂದೇ ಬಿಡುತ್ತೇನೆ ಅನ್ನುವ ಹಾಗೆ ಬರುತ್ತಾನೆ. ಆದರೆ ಮಾಸ್ತರು ಅವನನ್ನು ಕರೆದು ಹೇಳುವ ಮಾತು "ಈ ಸಾಲ ತೀರಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಅಂತಷ್ಟೇ ನಾನು ನಿನ್ನ ದನವನ್ನು ತಂದೆ, ತೆಗೋ ನಿನ್ನ ಪತ್ರ, ನಿನ್ನ ಸಾಲ ಮಾಫಾಯಿತು. ಹೋಗು" ಅನ್ನುತ್ತಾನೆ. ಆಗ್ಗೆ ರಂಗಯ್ಯ ಅವನ ಕಾಲಿಗೆ ಬಿದ್ದು ತಾನಲ್ಲದಿದ್ದರೆ ತನ್ನ ಮಗನಾದರೂ ಆ ಸಾಲವನ್ನು ತೀರಿಸುವ ಶಪಥವನ್ನು ಮಾಡುತ್ತಾನೆ--- ಇದನ್ನು ನಾವು ಪರಿಶೀಲಿಸಿದಾಗ ಇಲ್ಲಿ ಶೋಷಣೆಯ ಅಂಶವಂತೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅದಕ್ಕಿರುವ ಮಿತಿಯೂ ಕಾಣುವುದಿಲ್ಲವೇ? ಬಡ್ಡಿವ್ಯಾಪಾರಿ ಅದೇ ಸಮಾಜದಲ್ಲಿ ಬದುಕಬೇಕು- ಅದೇ ಜನರನ್ನು ದಿನವೂ ನೋಡಬೇಕು ಹೀಗಾಗಿ ಆತ ಒಂದು ಮಿತಿಯಲ್ಲಿ ಇರದಿದ್ದರೆ ಆತನ ಮೇಲಿನ ಸಿಟ್ಟು ಹದ್ದು ಮೀರುತ್ತದೆ ಅನ್ನುವುದನ್ನು ಮಂಚಿ ತಮ್ಮ ಕಥೆಯಲ್ಲಿ ಅದ್ಭುತವಾಗಿ ತೋರಿಸುತ್ತಾರೆ.

ಬಡ್ಡಿವ್ಯಾಪಾರಿಗಳ ಕಥೆಗಳನ್ನು ನಾವು ಕಂಡಾಗ, ಕೇಳಿದಾಗ ನಮಗೆ ಮನಸ್ಸಿಗೆ ತಟ್ಟುವುದು ಅವರುಗಳು ಎಷ್ಟು ಬಡ್ಡಿ ವಸೂಲು ಮಾಡುತ್ತಾರೆ ಅನ್ನುವ ಅಂಶ ಮಾತ್ರ. ಆದರೆ ನಮಗೆ ಅವರುಗಳ ಒಟ್ಟಾರೆ ವ್ಯಾಪಾರದ ಅಂಕಿ ಅಂಶಗಳು ಸಿಗುವುದೇ ಇಲ್ಲ. ಅವರು ಕೊಟ್ಟ ಸಾಲದಲ್ಲಿ ಬಾಕಿ ಉಳಿದು ವಸೂಲಾಗದ ಮೊತ್ತಗಳು ಎಷ್ಟಿರಬಹುದು? ಈ ಪ್ರಶ್ನೆಯನ್ನು ನಾವು ಕೇಳುವುದೇ ಇಲ್ಲ. ಕಾರಣ ಅವರು ಕೊಟ್ಟ ದುಡ್ಡೆಲ್ಲಾ ವಾಪಸ್ಸಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಬಗ್ಗೆ ಸೋಮ್ ಅವರ ಪೇಪರು ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಎಷ್ಟೋ ಬಾರಿ ಮಂಚಿಯ ಕಥೆಯಲ್ಲಿನ ಮಾಸ್ತರರಂತೆ - ಆಯಿತು, ನಿನ್ನ ಸಾಲ ತೀರಿದಂತೆಯೇ, ಎಂದೋ, ಅಥವಾ ಕಟ್ಟಲು ಸಾಧ್ಯವಾಗದಿದ್ದರೆ ’ಪರವಾಗಿಲ್ಲ’ ಎಂದು ಸಾಲದ ಸಮಯವನ್ನು ಬೆಳೆಸುವುದನ್ನೂ ಇವರುಗಳು ಮಾಡಬಹುದು. ಆ ಬಗ್ಗೆ ನಮಗೆ ಮಾಹಿತಿ ಸಿಗುವುದು ಕಷ್ಟದ ಮಾತೇ ಆದ್ದರಿಂದ ಬಡ್ಡಿವ್ಯಾಪಾರಿಗಳ ಧಂಧೆಯನ್ನು ಮಿಕ್ಕ ಹಣಕಾಸಿನ ವ್ಯಾಪರಕ್ಕೆ ಹೋಲಿಸಿ ನೋಡುವುದೂ ಕಷ್ಟವಾಗುತ್ತದೆ.

ನಾನು ಸ್ವ ಸಹಾಯ ಗುಂಪುಗಳ ಬಗ್ಗೆ ಇತ್ತೀಚೆಗೆ ಮಾಡಿದ ಒಂದು ಅಧ್ಯಯನದಲ್ಲಿ ಈ ಗುಂಪುಗಳು ಬಡ್ಡಿವ್ಯಾಪಾರಿಗಳ ಮೇಲೆ ಏನಾದರೂ ಪರಿಣಾಮ ಬೀರಿರಬಹುದೇ ಅನ್ನುವ ಪ್ರಶ್ನೆಯನ್ನು ಪರಿಶೀಲಿಸುವುದು ಒಂದು ಭಾಗವಾಗಿತ್ತು. ಮಾಹಿತಿಯಿಂದ ನಮಗೆ ತಿಳಿದದ್ದೇನೆಂದರೆ - ಬಡ್ಡಿವ್ಯಾಪರಿಗಳ ವ್ಯಾಪಾರವೂ ಸ್ವ-ಸಾಹಯ ಗುಂಪುಗಳ ವ್ಯಾಪಾರದ ಜೊತೆಜೊತೆಗೇ ಬೆಳೆದಿದ್ದು ಒಟ್ಟಾರೆ ಆ ಮಹಿಳೆಯರು ಪಡೆದ ಸಾಲದ ಮೊತ್ತವೂ ಹೆಚ್ಚಾಗಿತ್ತು. ಇದರಿಂದ ನಾವು ಚಿಂತಿತರಾಗಬೇಕೇ? ಇಲ್ಲವೆನ್ನಿಸುತ್ತದೆ. ಒಟ್ಟಾರೆ ಈ ವರ್ಷಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತುಸು ಹೆಚ್ಚಿನ ಆದಾಯ ಪಡೆದಿದ್ದ ಈ ಸಂಸಾರಗಳು ಹೆಚ್ಚಿನ ಸಾಲವನ್ನು ಪಡೆವ ಶಕ್ತಿಯನ್ನೂ ಹೊಂದಿದ್ದವು. ಸ್ವಸಹಾಯ ಗುಂಪುಗಳನ್ನು ಸೇರುತ್ತಿದ್ದಂತೆ ಮುಫತ್ತಾಗಿ ದೊರೆಯುತ್ತಿದ್ದ ಕೈಗಡ ಕೊಡುತ್ತಿದ್ದ ನೆರೆಕೆರೆಯವರು ’ನಿಮಗೆ ಈಗ ಗುಂಪಿದೆಯಲ್ಲಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದದರಿಂದ ಆ ಕೈಗಡ ನಿಂತಿತ್ತು. ಹಾಗೂ ಸ್ವಸಹಾಯ ಗುಂಪುಗಳು ಕೆಲವೊಂದು ಉಪಯೋಗಕ್ಕೆ ಮಾತ್ರ ಸಾಲವನ್ನು ನೀಡುತ್ತಿದ್ದುವು. ಹೀಗೆ ಬಡ್ಡಿವ್ಯಾಪಾರಿ ಇವರುಗಳ ಜೀವನದಲ್ಲಿ ಅವಿನಾಭಾವ ಭಾಗವಾಗಿ ನಿಂತುಬಿಟ್ಟಿದ್ದ. ಹಾಗಾದರೆ ಗುಂಪುಗಳು ಸ್ಥಾಪಿತವಾದ್ದರಿಂದ ಪ್ರಯೋಜನವೇ ಇಲ್ಲವೇನು? ಈ ಪ್ರಶ್ನೆಗೆ ಉತ್ತರ ನಮಗೆ ಬಡ್ಡಿ ದರದಲ್ಲಿ ಕಾಣಿಸಿತು. ಮುಂಚೆ ತಿಂಗಳಿಗೆ ಸರಾಸರಿ ಮೂರು ಪ್ರತಿಶತ ಬಡ್ಡಿಕೊಡುತ್ತಿದ್ದ ಈ ಮಹಿಳೆಯರು, ಅದೇ ಬಡ್ಡಿವ್ಯಾಪಾರಿಗಳಿಗೆ ತಿಂಗಳಿಗೆ ಎರಡು ಪ್ರತಿಶತ ಬಡ್ಡಿಕೊಡುತ್ತಿದ್ದರು!

ಆ ಮಹಿಳೆಯರ ಜೊತೆ ನಾನು ಮಾತನಾಡುತ್ತಾ, ಇನ್ನೂ ಬಡ್ಡಿವ್ಯಾಪಾರಿಗಳ ಬಳಿ ಯಾಕೆ ಸಾಲ ಪಡೆಯುತ್ತಿದ್ದೀರಿ ಎಂದು ಕೆಲ ಮಹಿಳೆಯರನ್ನು ಕೇಳಿದ್ದೆ. ಅದಕ್ಕೆ ಅವರು "ಸಾರ್, ಮನೆಯಲ್ಲಿ ಮದುವೆ ಕಾರ್ಯಕ್ಕೆ ಸಾಲ ಬೇಕಾದರೆ ನಾವು ಬಡ್ಡಿವ್ಯಾಪಾರಿಗಳ ಬಳಿಗೇ ಹೋಗುತ್ತೇವೆ, ಯಾಕೆಂದರೆ ನಾವು ಗುಂಪಿನ ಬಳಿ ಇದಕ್ಕಾಗಿ ಸಾಲ ಕೇಳಲು ಹೋದರೆ ನಮಗೆ ದೊರೆಯುವುದು ಮದುವೆಯ ದುಂದಿನ ಬಗ್ಗೆ ಒಂದು ಭಾಷಣವೇ ಹೊರತು, ಹಣವಲ್ಲ" ಅಂದರು. ಈ ಬಗ್ಗೆ ನಾನು ಹೆಚ್ಚು ವಾದಿಸಲು ಹೋಗಲಿಲ್ಲ. ಕಾರಣ ಆಕೆ "ಸರ್ ನೀವು ನಿಮ್ಮ ಮದುವೆ ಎಲ್ಲಿ ಮಾಡಿಕೊಂಡಿರಿ, ಎಷ್ಟು ಖರ್ಚಾಯಿತು?" ಅನ್ನುವ ಅಣ್ವಸ್ತ್ರಗಳನ್ನು ನನ್ನಮೇಲೆ ಪ್ರಯೋಗಿಸಿದ್ದರಿಂದ, ನಮ್ಮ ಸಂಭಾಷಣೆ ಪಡೆವ ದಿಕ್ಕಿನ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆಕೆಯ ಮಾತಿನ ಅರ್ಥವಿಷ್ಟೇ - ಬಡವರಾದ ಮಾತ್ರಕ್ಕೇ ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಜನರಿಗೆ ಊಟ ಹಾಕಿ, ಒಂದು ಔತಣವನ್ನು ನೀಡುವುದು ’ದುಂದು’ ವೆಚ್ಚ ಎಂದು ಉಪದೇಶ ಮಾಡುವ ಹಕ್ಕು ನಮಗಾಗಲೀ, ಗುಂಪುಗಳನ್ನು ನಡೆಸುವವರಿಗಾಗಲೀ ಎಲ್ಲಿಂದ ಬಂತು ಅನ್ನುವುದನ್ನು ಆಕೆ ಕೇಳುತ್ತಿದ್ದರು. ಬಡ್ಡಿವ್ಯಾಪಾರಿಯಾದರೆ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ. ಆತನಿಗೆ ಈ ಅವಶ್ಯಕತೆಯ ಮಹತ್ವ ಗೊತ್ತು. ಹೀಗಾಗಿಯೇ:

ಹೀಗೆ ಬಡ್ಡಿವ್ಯಾಪಾರಿಗಳನ್ನು ಸುಲಭವಾಗಿ ನಾವು ತಳ್ಳಿಹಾಕುವಂತಿಲ್ಲ. ಬದಲಿಗೆ ಅವರ ಪಾತ್ರವೇನೆಂದು ಅರ್ಥಮಾಡಿಕೊಂಡು ಆ ರಾಕ್ಷಸೀ ವೃತ್ತಿಯಲ್ಲಿರಬಹುದಾದ ದೈವತ್ವವನ್ನು ನಾವು ಕಾಣಬೇಕಾಗಿದೆಯೇನೋ!!


No comments:

Post a Comment