Saturday, April 6, 2013

ಬಂಡವಾಳಶಾಹಿ ತತ್ವದ ನಿರಂತರತೆ?


ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.

ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.
ಈ ಗಹನ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು. ಈ ಲೋಕದಿಂದ ಅನಾಮಾನ್ಯತೆಯನ್ನು ಅಟ್ಟುವುದು ಎಷ್ಟು ಅಸಾಧ್ಯವೋ, ಬಂಡವಾಳಶಾಹಿ ವ್ಯಾಪಾರ ಸೂತ್ರಗಳನ್ನು ಕಿತ್ತೊಗೆಯುವುದು ಅಷ್ಟೇ ಕಷ್ಟದ, ಸಾಧಿಸಲಾಗದ ಮಾತು. ಇದು ಕೇಂದ್ರದ ಎಡಗಡೆಗೆ ವಾಲಿದ ಆ ಇಬ್ಬರಿಗೂ ಗೊತ್ತು. ಹಾಗೇ ಬಲಗಡೆಗೆ ವಾಲಿದ, ಜೀವನ ಸೂತ್ರವೇ ವ್ಯಾಪಾರಶಾಹೀತನವನ್ನು ನಂಬಿ ಬದುಕುತ್ತಿರುವ ಇನ್ನಿಬ್ಬರಿಗೂ ಗೂತ್ತು. ಅದೇ ಅವರ ಜೀವನ ಧರ್ಮವೂ ಆಗಿತ್ತು. ಹೀಗೆ ಸೆಮಿನಾರನ್ನು ರೂಪಿಸಿ, ಎಡಪಂಥದತ್ತ ವಾಲಿದವರಿಂದ, ಮಾರುಕಟ್ಟೆಯ ಸೂತ್ರಗಳನ್ನು ಒಂದಿಲ್ಲೊಂದು ರೀತಿಯಿಂದ ಟೀಕಿಸುತ್ತಿರುವ ನಮ್ಮಿಂದ - ಬಂಡವಾಳಶಾಹಿ ವ್ಯಾಪಾರವಿಲ್ಲದೇ ಬದುಕು ನಡೆಯದೆಂದು ಹೇಳಿಸಬೇಕೆನ್ನುವ ದುಷ್ಟ ಹುನ್ನಾರ ನಮ್ಮ ವಿದ್ಯಾರ್ಥಿಗಳದ್ದಿರಬಹುದೇ ಅನ್ನುವ ಅನುಮಾನವೂ ನನ್ನನ್ನು ಕಾಡದಿರಲಿಲ್ಲ.

ವೇದಿಕೆಯನ್ನೇರಲು ಒಪ್ಪಿದ್ದರಿಂದ ಈ ಬಗ್ಗೆ ಗಹನವಾಗಿ ಆಲೋಚಿಸುವ ಅನಿವಾರ್ಯತೆ ನಮ್ಮನ್ನೆಲ್ಲ ಸುತ್ತಿಕೊಂಡಿತ್ತು. ಸಮಾಜವಾದ, ಕಮ್ಯುನಿಸಂಗಳ ಪ್ರಯೋಗದ ವಿಫಲತೆ-ಸಾಫಲ್ಯವನ್ನು ವಿಶ್ವದ ಅನುಭವದ ಆಧಾರದ ಮೇಲೆ ಗಮನಿಸಿದಾಗ - ಮುಖ್ಯವಾಗಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿ ನಡೆದ ಸೋವಿಯತ್ ರಷ್ಯಾ, ಪೂರ್ವ ಯೂರೋಪ್, ಹಾಗೂ ಆ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದೇವೆಂದು ಘೋಷಿಸುತ್ತಾ ಮುಂದುವರೆವ ಚೀನಾ, ಹಾಗೂ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಸರಕಾರಗಳ ಸೂತ್ರಗಳನ್ನು ಗಮನಿಸಿದಾಗ ಎಡಪಂಥೀಯ ವಿಚಾರಧಾರೆಯ ಬಗ್ಗೆ ಅನುಮಾನ ಬರುವುದು ಅದರ ಮಿತಿಗಳ ಬಗ್ಗೆ ಮನವರಿಕೆಯಾಗುವುದು ಸಹಜವೇ ಆಗಿತ್ತು.




ಆದರೆ ಇತ್ತ ವ್ಯಾಪಾರವಾದವನ್ನೂ ಆರಾಧಿಸದೇ, ಕಮ್ಯುನಿಸಂನ ಪ್ರತಿಪಾದಿಸದೇ ನೆಹರೂ ಪ್ರೇರಿತ ಸಮಾಜವಾದದ ಮಧ್ಯದಾರಿಯನ್ನು ಹಿಡಿದು ಹೊರಟರೆ, ಅರ್ಧ ಮಾರುಕಟ್ಟೆ, ಅರ್ಧ ಸರಕಾರಿ ಪ್ರೇರಿತ ವಿಕಾಸದ ದಾರಿಯಲ್ಲಿ ಹೋಗುವುದೂ ಕಷ್ಟದ ಮಾತೇ. ಅಮೆರಿಕದ ನಾಯಕತ್ವದಲ್ಲಿ ಅಳವಡಿಸಿಕೊಂಡ ವ್ಯಾಪಾರಶಾಹಿ ಸೂತ್ರಗಳ ಆಧಾರದ ಮೇಲೆ ನಡೆಸುತ್ತಿದ್ದ ವಿತ್ತೀಯ ಕ್ಷೇತ್ರ ವ್ಯಾಪಾರಿಗಳ ಅತಿಯಾಸೆ ಮತ್ತು ಲೋಲುಪತೆಗಳ ಫಲವಾಗಿ ತತ್ತರಿಸುತ್ತಿದ್ದಾಗ - ರಾಷ್ಟ್ರೀಕೃತ ಬ್ಯಾಂಕುಗಳ ನೇತೃತ್ವದಲ್ಲಿ ಸರಕಾರಿ ಭಾಗಸ್ವಮ್ಯದಲ್ಲಿ ನಡೆಯುತ್ತಿದ್ದ ಭಾರತೀಯ ವಿತ್ತೀಯ ಕ್ಷೇತ್ರ - ಯಾವ ವಿಕ್ಷೊಭಕ್ಕೂ ಒಳಗಾಗದೇ ವಿಶ್ವದಲ್ಲಿಯೇ ಒಂದು ಮಾದರಿಯಾಗಿ ನಿಂತುಬಿಟ್ಟಿತ್ತು. ಇದಕ್ಕೆ ಸಲ್ಲಬೇಕಾದ ಕೀರ್ತಿ ತಮ್ಮದೆಂದು ನಮ್ಮ ದೇಶದ ಎಡಪಂಥೀಯ ಪಕ್ಷಗಳು ಹೇಳಿಕೆಗಳನ್ನು ಕೊಟ್ಟದ್ದೂ ಉಂಟು. ಆದರೆ ಇದೊಂದು ಯಶಸ್ವೀ ಮಾರ್ಗವೆಂದು ಇದನ್ನು ನಂಬುವ ಮೊದಲೇ, ಸರಕಾರೀ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲಾಗದೇ ಸರಕಾರೀ ಕವಚವಿದ್ದೂ ತೇಲಲಾಗದೇ ಅಧೋಗತಿಗಿಳಿದಿದ್ದನ್ನೂ ನಾವು ನೋಡಿದ್ದವು. ಹೀಗಾಗಿ ಈ ವಾದದಲ್ಲಿ ಎರಡರಲ್ಲೊಂದು ಪಕ್ಷ ಹಿಡಿದು ವಾದಿಸುವುದರಲ್ಲಿ ಅಪಾಯವೇ ಇತ್ತು.

ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.

ಎಡಪಂಥೀಯರು ಸಮಾನತೆಯ ಮೂಲಸೂತ್ರವನ್ನು ಹಿಡಿದು ಹೊರಟವರು. ಮಾರುಕಟ್ಟೆಯನ್ನೇ ದೈವ ಮಾಡಿಕೊಂಡವರಿಗೆ ಈ ಸಮಾನತೆಯೇ ಅ-ಸಮಾನತೆಯ ಪ್ರತೀಕವಾಗಿ ಕಾಣುತ್ತದೆ. ಮಾರುಕಟ್ಟೆ ದೈವವಾದರೆ, ಹೆಚ್ಚಿನ ಕೆಲಸ ಮಾಡಿದವರಿಗೆ - ಹೆಚ್ಚಿನ ದಕ್ಷತೆ ತೋರಿದವರಿಗೆ ಹೆಚ್ಚಿನ ಫಾಯಿದೆಯಾಗಬೇಕು ಎನ್ನುವುದು ಸಹಜ ನಂಬಿಕೆ. ಸಮಾನತೆಯಿರುವುದು ದಕ್ಷತೆಯನ್ನ ಅಳೆಯುವ ಸೂತ್ರದಲ್ಲಿ ಅನ್ನುವ ವಾದವನ್ನು ಇವರು ಮಂಡಿಸುತ್ತಾರೆ. ಆದರೆ ಎಡಪಂಥೀಯರು ಈ ದಕ್ಷತೆ ಪ್ರಾಪ್ತವಾಗುವ ಪರಿಗಿರುವ ಚಾರಿತ್ರಿಕ ಕಾರಣಗಳ ಮೂಲಕ್ಕೆ ಹೋಗುತ್ತಾರೆ. ಹೀಗಾಗಿ ಅವರ ವಾದದ ಅನುಸಾರ ದಕ್ಷತೆಯನ್ನು ಆರ್ಜಿಸಲೇ ಒಂದೆರಡು ತಲೆಮಾರುಗಳು ಬೇಕಾಗಬಹದಾದ್ದರಿಂದ ಆ ನಡುವಿನ ಕಾಲದಲ್ಲಿ ಮಾಪನದ ದಂಡಗಳು ಭಿನ್ನವಾಗಿರಬೇಕು ಅನ್ನುವುದನ್ನು ನಾವು ಪರಿಗಣಿಸಬೇಕಾಗುತ್ತದೆ.

ಪರಿಸರವಾದಿಗಳು ಯೋಚಿಸುವಾಗ ಅವರ ದೃಕ್ಪಥ ಸಾಮಾನ್ಯವಾಗಿ ಮುಂದಿನ ತಲೆಮಾರುಗಳಿಗೆ ನಾವು ಎಂಥಹ ಪರಿಸರವನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಅನ್ನುವ ಭವಿಷ್ಯವಾದೀ ದೃಕ್ಪಥವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿ ಇವರುಗಳ ಕಾಲಮಾಪನವೂ ತಲೆಮಾರುಗಳಲ್ಲಿಯೇ ಇರುತ್ತದೆ. ವ್ಯತ್ಯಾಸವೆಂದರೆ - ಎಡಪಂಥೀಯರು ಅ-ಸಮಾನತೆಯ ಮೂಲವನ್ನು ಭೂತದಲ್ಲಿ ಹುಡುಕಿ ಅದಕ್ಕೊಂದು ಕಾವ್ಯನ್ಯಾಯವನ್ನೊದಗಿಸುವ ಮಾತನ್ನಾಡಿದರೆ, ಪರಿಸರವಾದಿಗಳ ಕಾಲದಿಗಂತ ಭವಿಷ್ಯದಲ್ಲಿರುತ್ತದೆ.

ಆದರೆ ಮಾರುಕಟ್ಟೆಯನ್ನು ನಂಬಿದವರ ಆಲೋಚನಾಲಹರಿ ಈಗಿಲ್ಲಿ - ಹಿಯರ್ ಆಂಡ್ ನೌ - ಎನ್ನುವ, ಬಹತೇಕ ತಮ್ಮ ಜೀವನಕಾಲದಲ್ಲಿ ಲಾಭಾರ್ಜನೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಜೀವನಕಾಲವೂ ದೊಡ್ಡಕಾಲಮಾಪನವೇ. ಲಾಭಾರ್ಜನೆಯ ಮಾಪನವನ್ನು ಅನೇಕ ವರ್ಷಗಳ ಮಾತಿರಲಿ, ವಾರ್ಷಿಕ ಮತ್ತು ಮೂರು ತಿಂಗಳಲ್ಲಿ ಎಷ್ಟು ಲಾಭವನ್ನಾರ್ಜಿಸಿದ್ದೇವೆನ್ನುವ, ಅವಧಿಗೆ ಆ ಕಾಲಮಾಪನವನ್ನು ಮಾರುಕಟ್ಟೆಗಳು ಇಳಿಸಿಬಿಟ್ಟಿವೆ. ಪೈಪೋಟಿಯ ಕಬಳಿಕೆಯ ಈ ವಾತಾವರಣದಲ್ಲಿ ಬಂಡವಾಳಶಾಹಿಗಳಿಗೂ, ಎಡಪಂಥೀಯರಿಗೂ, ಪರಿಸರವಾದಿಗಳಿಗೂ ಇರುವ ಮೂಲಭೂತ ವ್ಯತ್ಯಾಸ ಕಾಲ ದಿಗಂತದ್ದು ಅನ್ನಿಸುತ್ತದೆ. ನಾವು ಬಂಡವಾಳಶಾಹಿ ಸಂಸ್ಥೆಗಳನ್ನೇ ನೋಡಿದಾಗ - ಒಟ್ಟಾರೆ ಜನಮನದಲ್ಲಿ ಗೌರವವನ್ನು ಪಡೆದಿರುವ ಎಡಿಸನ್ ನಿರ್ಮಿಸಿದ ಜೆನರಲ್ ಎಲೆಕ್ಟ್ರಿಕ್, ಭಾರತದ ಟಾಟಾ ಸಂಸ್ಥೆಗಳಿಗೂ - ಇಂದಿದ್ದು ನಾಳೆ ಮಾಯವಾಗುವ ಕಂಪನಿಗಳಿಗೂ ಇರುವ ಮೂಲಭೂತ ವ್ಯತ್ಯಾಸವೂ ದಿಗಂತದ ದೃಕ್ಪಥಕ್ಕೆ ಸಂಬಂಧಿಸಿದ್ದೇ ಇರಬಹುದು.

ಹೀಗಾಗಿಯೇ ಬಂಡವಾಳಶಾಹಿ ತತ್ವದ ನಿರಂತರತೆಯನ್ನು ಎಡಪಂಥೀಯರೂ, ಪರಿಸರವಾದಿಗಳೂ, ಇಷ್ಟವಿಲ್ಲದಿದ್ದರೂ, ಒಪ್ಪುತ್ತಲೇ ತಮ್ಮ ತಮ್ಮ ಹೋರಾಟವನ್ನು ವ್ಯಾಪಾರವಾದಿಗಳ ಕಾಲದಿಗಂತವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ 150 ವರ್ಷಗಳ ಚರಿತ್ರೆ - ಅನೇಕ ತಲೆಮಾರುಗಳನ್ನು ಕಂಡ - ಲೀಮನ್ ಬ್ರದರ್ಸ್ ನಂತಹ ಸಂಸ್ಥೆ ರಾತ್ರೋರಾತ್ರಿ ಮುಳುಗಿದ್ದರ ಹಿನ್ನೆಲೆಯೇನು? ಅಲ್ಲಿಯೂ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ತಾವು ನಡೆಸುತ್ತಿರುವ ವ್ಯಪಾರಕ್ಕೆ ಸಲ್ಲುತ್ತಿರುವ ಲಾಭ ಸಮಂಜಸವಾದದ್ದೇ ಅನ್ನುವುದನ್ನ ಆಗಾಗ ಅವಲೋಕಿಸಿಕೊಳ್ಳಬೇಕಾಗುತ್ತದೆ. ಉಜ್ವಲ ಚರಿತ್ರೆಯಿರುವುದು ಭವ್ಯ ಭವಿಷ್ಯಕ್ಕೆ ನೀಡುವ ಗ್ಯಾರೆಂಟಿಯಂತೂ ಅಲ್ಲವೇ ಅಲ್ಲ. ಕೆಲವೇ ಸಾರ್ಥಪರ ಲೋಲುಪಿ ಮ್ಯಾನೇಜರುಗಳ ಅತಿಯಾಸೆ 150 ವರ್ಷಗಳ ಚರಿತ್ರೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಣ್ಣು ಮುಕ್ಕಿಸಬಹುದೆಂದು ಅನೇಕ ಬಾರಿ ನಿರೂಪಿಸಿದ್ದಾರೆ. ಹೀಗಾಗಿ ನಾವು ಕೇಳುತ್ತಿರುವ ಈ ಪ್ರಶ್ನೆ ವಿಚಾರಧಾರೆಯ ಪ್ರಶ್ನೆಯಲ್ಲವೇ ಅಲ್ಲ - ಬದಲಿಗೆ ಆ ವಿಚಾರಧಾರೆಯನ್ನು ಯಾವ ಚೌಕಟ್ಟಿನೊಳಗೆ, ಯಾವ ಮಿತಿಗಳೊಳಗೆ ಅರ್ಥೈಸುತ್ತೇವೆ, ಆ ಮಿತಿಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಅನ್ನುವ ಯೋಚನೆ ಮುಖ್ಯವಾದದ್ದು ಅನ್ನಿಸುತ್ತದೆ. ಹೀಗಾಗಿಯೇ ನನ್ನಂತಹ ಕುತೂಹಲಿ ಮೇಷ್ಟರುಗಳು ಎರಡೂ ವಾದಗಳನ್ನು ನೋಡುತ್ತಾ ಎಡಕ್ಕೂ ವಾಲದೇ, ಬಲಕ್ಕೂ ಬೀಳದೇ ಮುಂದುವರೆಯುವ ಕುಶಲಕೆಲಸವನ್ನು ಮಾಡಿ ಜೀವನ ನಡೆಸಬೇಕಾಗಿದೆ.


ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ




ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.

ಗ್ರಾಮೀಣ್ ಬ್ಯಾಂಕ್ ಬಡವರಿಗೆ ಸಾಲ ನೀಡುತ್ತಿದ್ದ ರೀತಿ ಅತೀ ಸರಳವಾದದ್ದು. ಬಡವರಿಗೆ ವಿತ್ತೀಯ ಸೇವೆಗಳು ಸಂದಬೇಕಾದರೆ ಬ್ಯಾಂಕೇ ಅವರ ಬಳಿಗೆ ಹೋಗಬೇಕೆಂದು ನಂಬಿದವರು ಯೂನಸ್. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಿನ ಬಹುತೇಕ ವ್ಯಾಪಾರ ಹಳ್ಳಿಯ ನಡುವಿನಲ್ಲಿ ನಿಗದಿತ ಸಮಯಾನುಸಾರ ಶಿಸ್ತಿನಿಂದ ನಡೆಯುತ್ತದೆ. ಗ್ರಾಮೀಣ್ ಬ್ಯಾಂಕಿನ ಪದ್ಧತಿ ಎಷ್ಟು ಸರಳವೆಂದರೆ ಅದರ ಸೂತ್ರಗಳನ್ನು ವಿಶ್ವದ ಅನೇಕ ಮೂಲೆಗಳಲ್ಲಿ ಅಳವಡಿಸಿ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಿದೆ. ಭಾರತದಲ್ಲೂ ನಾವು ಮೈಕ್ರೋಫೈನಾನ್ಸ್ ಅಂದಾಗ ನಮಗೆ ಸ್ವಸಹಾಯ ಗುಂಪುಗಳ ಜೊತೆಗೇ ಕಾಣುವುದು ಗ್ರಾಮೀಣ್ ಬ್ಯಾಂಕ್ ಮಾದರಿಯ ಸಂಸ್ಥೆಗಳು. ದೊಡ್ಡದಾಗಿ ಬೆಳೆದಿರುವ ಎಸ್.ಕೆ.ಸ್, ಷೇರ್, ಸ್ಪಂದನಾ, ಕರ್ನಾಟಕದಲ್ಲಿನ ಗ್ರಾಮೀಣ ಕೂಟ - ಎಲ್ಲವೂ ಗ್ರಾಮೀಣ್ ಬ್ಯಾಂಕಿನ ಸೂತ್ರಗಳನ್ನೇ ಅಳವಡಿಸಿ ತಮ್ಮ ಕಾರ್ಯಕ್ರಮವನ್ನು ಮುಂದುವರೆಸುತ್ತಿವೆ. ಆದರೂ ವಿಶ್ವದ ಅನೇಕ ಮೂಲೆಗಳಲ್ಲಿ ಹಬ್ಬಿರುವ ಈ ಕಾರ್ಯಕ್ರಮದ ಬಗ್ಗೆ ಯೂನಸ್ ಆಗಾಗ ಅಸಹನೆ ವ್ಯಕ್ತಪಡಿಸುತ್ತಾರೆ.

ಈಚೆಗೆ ಫೋರ್ಬ್ಸ್ ಪತ್ರಿಕೆಯಲ್ಲಿ ಎಸ್.ಕೆ.ಎಸ್ ಬಗ್ಗೆ ಬಂದ ಲೇಖನದಲ್ಲೂ ಯೂನಸ್ ಆ ಸಂಸ್ಥೆಯ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಿಷ್ಟೇ: ಮಿಕ್ಕೆಲ್ಲ ಗ್ರಾಮೀಣ್ ಥರದ ಕಾರ್ಯಕ್ರಮಗಳಿಗೂ ಯೂನಸ್ ನಡೆಸುವ ಕಾರ್ಯಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ವ್ಯತ್ಯಾಸವೆಂದರೆ ಕಾರ್ಯಕ್ರಮದ ವ್ಯಾಪಾರದಿಂದ ಆರ್ಜಿಸಿದ ಲಾಭ ಯಾರ ಕೈಗೆ ಹೋಗುತ್ತದೆ ಅನ್ನುವುದಾಗಿದೆ. ಗ್ರಾಮೀಣ್ ಬ್ಯಾಂಕಿನ ೯೦ ಪ್ರತಿಶತಕ್ಕೂ ಹೆಚ್ಚು ಮಾಲೀಕತ್ವ ಇರುವುದು ಆ ಸಂಸ್ಥೆಯ ಗ್ರಾಹಕ ಮಹಿಳೆಯರ ಕೈಯಲ್ಲಿ. ಹೀಗಾಗಿ ಗ್ರಾಹಕರಿಂದ ಆರ್ಜಿಸಿದ ಲಾಭವೆಲ್ಲಾ ಅವರ ಕೈಯಲ್ಲಿಯೇ ಇರುತ್ತದೆ. ನಮ್ಮ ಸ್ವ ಸಹಾಯ ಗುಂಪುಗಳ ಸೂತ್ರವೂ ಇದೇ. ಗುಂಪುಗಳು ಆರ್ಜಿಸಿದ ಲಾಭ ಗುಂಪಿನ ಕೈಯಲ್ಲೇ ಇರುತ್ತದೆ. ಎಸ್.ಕೆ.ಎಸ್ ಅಥವಾ ಗ್ರಾಮೀಣ ಕೂಟದಂಥಹ ಸಂಸ್ಥೆಯಲ್ಲಿ ಹೀಗೆ ಬಡ ಗ್ರಾಹಕರಿಂದ ಆರ್ಜಿಸಿದ ಧನ ಲಾಭಾಂಶವಾಗಿ ಹೂಡಿಕೆದಾರರ ಕೈಗೆ ಹೋಗುತ್ತದೆ.

ವಿತ್ತೀಯ ಸೇವೆಯನ್ನು ಒದಗಿಸುವದೇ ಒಂದು ಉದ್ದೇಶ - ಅದರಿಂದಲೇ ಬಡವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ, ಹಾಗೂ ಲಾಭವನ್ನು ಹೂಡಿಕೆದಾರರಿಗೆ ನೀಡಿದರೆ ಅವರುಗಳು ಇನ್ನೂ ಹೆಚ್ಚು ಹೂಡಿಕೆಯನ್ನು ಹಾಕುತ್ತಾರೆ, ಅದರಿಂದ ಹೆಚ್ಚಿನ ಜನರಿಗೆ, ಹೆಚ್ಚು ಕ್ಷೇತ್ರಗಳಲ್ಲಿನ ಬಡವರಿಗೆ ವಿತ್ತೀಯ ಸೇವೆಗಳನ್ನೊದಗಿಸಬಹುದು ಅನ್ನುವುದು ಎಸ್.ಕೆ.ಎಸ್.ನ ವಿಕ್ರಂ ಅವರ ವಾದ. ಈ ಬಗ್ಗೆ ಮೈಕ್ರೋಫೈನಾನ್ಸ್ ಜಗತ್ತಿನಲ್ಲಿ ವಾದವಿವಾದಗಳು ನಡೆಯುತ್ತಲೇ ಇವೆ. ಕೆಲ ವರ್ಷಗಳ ಹಿಂದೆ ಮೆಕ್ಸಿಕೊ ದೇಶದ ಕಂಪಾರ್ತಮೋಸ್ ಅನ್ನುವ ಚಿಕ್ಕಸಾಲದ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡಿ ಅದಕ್ಕೆ ಹೆಚ್ಚಿನ ಬೆಲೆ ಬಂದಾಗಲೂ ಈ ಚರ್ಚೆ ತುಂಬಾ ಕಾವನ್ನು ಪಡೆದಿತ್ತು.

ಈ ಎಲ್ಲವನ್ನೂ ಟೀಕಿಸುತ್ತಲೇ ಯೂನಸ್ ಪ್ರಪಂಚಕ್ಕೆ ಒಂದು ಭಿನ್ನ ವ್ಯಾಪಾರ ಮಾದರಿಯನ್ನು ಒದಗಿಸುತ್ತಾರೆ. ಯೂನಸ್ ಒಬ್ಬ ಕನಸುಗಾರ ಅನ್ನುವುದಕ್ಕೆ ಅವರ ಈಚಿನ ಬರವಣಿಗೆಯೇ ಸಾಕ್ಷಿ. ಅವರ ಪ್ರಕಾರ ತಮ್ಮ ಜೀವನದ ಉದ್ದೇಶವೆಂದರೆ ಬಡತನವನ್ನು ಸಂಗ್ರಹಾಲಯದ ಪ್ರದರ್ಶನಕ್ಕೆ ಅಟ್ಟುವುದು. ಅರ್ಥಾತ್: ಮುಂದಿನ ಪೀಳಿಗೆಗೆ ನಾವು ಚರಿತ್ರೆಯನ್ನು ವಿವರಿಸುತ್ತಾ, ಒಂದಾನೊಂದು ಕಾಲದಲ್ಲಿ ಬಡತನವೆನ್ನುವ ಮಾತಿತ್ತು. ಬಡವರೆನ್ನುವವರು ಹೀಗಲ್ಲಾ ಜೀವಿಸುತ್ತಿದ್ದರು - ಅವರಿಗೆ ಊಟಕ್ಕೆ, ಬಟ್ಟೆಗೆ, ವಸತಿಗೆ ಕಷ್ಟವಾಗುತ್ತಿತ್ತು ಅನ್ನುವ ಕಥೆಗಳನ್ನು ಹೇಳುವ, ಬಡತನವೆಂದರೆ ಹೇಗಿತ್ತು ಅನ್ನುವ ಕುತೂಹಲದ ಅಧ್ಯಯನ ಆಗುವ ಸ್ಥಿತಿಗೆ ಬರುವಷ್ಟರ ಮಟ್ಟಿಗೆ ನಾವು ಪ್ರಗತಿ ಸಾಧಿಸಬೇಕು. ಬಡತನವನ್ನು ಹೀಗೆ ಸಂಗ್ರಹಾಲಯಕ್ಕೆ ಅಟ್ಟುವ ಅವರ ಮಹಾದೃಷ್ಟಿಯ ಬಗ್ಗೆ ಯೂನಸ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕದಲ್ಲಿ ಶಾಂತಿ, ವ್ಯಾಪಾರ, ಮತ್ತು ಬಡತನದ ಬಗ್ಗೆ ಅನೇಕ ಗಮ್ಮತ್ತಿನ ವಿಚಾರಗಳಿವೆ.

ಬಡತನವೇ ಅಶಾಂತಿಗೆ ಮೂಲ ಕಾರಣ ಎಂದು ತಮ್ಮ ನೊಬೆಲ್ ಪುರಸ್ಕಾರದ ಸ್ವೀಕಾರದಲ್ಲಿ ಹೇಳಿ ಯೂನಸ್ ತಮಗೂ ಗ್ರಾಮೀಣ್ ಬ್ಯಾಂಕಿಗೂ ಬಂದಿರುವ ಶಾಂತಿ ಪುರಸ್ಕಾರವನ್ನು ಅರ್ಥೈಸುತ್ತಾರೆ. ಆದರೆ ಬಡತನದ ನಿರ್ಮೂಲನೆಗೆ ದೇಣಿಗೆಯ ರೀತಿಯ ವಿಕಾಸದ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಬದಲು ಸಾಮಾಜಿಕ ವ್ಯಾಪಾರವನ್ನು ಮಾಡುವುದು ಒಳ್ಳೆಯದೆಂದು ಆತ ಹೇಳುತ್ತಾರೆ. ತಮ್ಮ ವಾದವನ್ನು ಮಂಡಿಸುತ್ತಾ ಯೂನಸ್ ಎರಡು ರೀತಿಯ ಸಾಮಾಜಿಕ ವ್ಯಾಪಾರಗಳನ್ನು ವಿಶ್ಲೇಷಿಸುತ್ತಾರೆ.

ಮೊದಲನೆಯ ರೀತಿಯ ವ್ಯಾಪಾರ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯುತ್ತಿರುವ ಬಂಡವಾಳಶಾಹಿಗಳೂ - ಸಾಮಾಜಿಕ ಕಾಳಜಿಯುಳ್ಳ ಗ್ರಾಮೀಣ್ ಸಂಸ್ಥೆಯಂತಹ ’ವಿಕಾಸ’ದ ಹೃದಯವುಳ್ಳ ಸಂಸ್ಥೆಗಳ ನಡುವಿನ ಭಾಗಸ್ವಾಮ್ಯದ ಮಾದರಿಯನ್ನು ಅವರು ಪ್ರತಿಪಾದಿಸುತ್ತಾರೆ. ಈ ವ್ಯಾಪಾರದಲ್ಲಿ ಲಾಭ ಉಂಟಾಗಬಹುದಾದರೂ, ಆ ಲಾಭವನ್ನು ಯಾರಿಗೂ ಹಂಚಲು ಸಾಧ್ಯವಿಲ್ಲ, ಬದಲಿಗೆ ಅಂಥಹ ಲಾಭ ಭಿನ್ನಭಿನ್ನ ಸಾಮಾಜಿಕ ವ್ಯಾಪಾರಗಳಲ್ಲಿ ಹೂಡಿಕೆಯಾಗಿ ಮುಂದುವರೆಯುತ್ತದೆ. ಹೀಗಾಗಿ ಸಾಮಾಜಿಕ ಉನ್ನತಿಯೇ ಉದ್ದೇಶವಾಗಿರುವ, ಲಾಭದ ಬಯಕೆಯಿಲ್ಲದ ಸಾಮಾಜಿಕ ವ್ಯಾಪಾರಗಳು ಪ್ರಪಂಚದಾದ್ಯಂತ ಉದ್ಭವವಾಗುತ್ತದೆಂದು ಅವರ ನಂಬಿಕೆ. ಗ್ರಾಮೀಣ್ ಬ್ಯಾಂಕ್ ಮತ್ತು ಡಾನೋನ್ ಸಂಸ್ಥೆಯ ನಡುವಿನ ಭಾಗಸ್ವಾಮ್ಯದಲ್ಲಿ ಬಡವರ ಸೇವನೆಗೆಂದು ಪುಷ್ಟಿಕರ ಮೊಸರಿನ ಕಾರ್ಖಾನೆಯನ್ನು ಸ್ಥಾಪಿಸಿರುವ ಉದಾಹರಣೆಯನ್ನು ಯೂನಸ್ ತಮ್ಮ ಬರವಣಿಗೆಯಲ್ಲಿ ಮಂಡಿಸುತ್ತಾರೆ.

ಎರಡನೆಯ ರೀತಿಯ ವ್ಯಾಪಾರ, ಬಡವರೇ ಮಾಲೀಕತ್ವ ಪಡೆದಿರುವ [ಗ್ರಾಮೀಣ್ ಬ್ಯಾಂಕಿನಂತಹ] ಸಂಸ್ಥೆಗಳು ನಡೆಸುವ ವ್ಯಾಪಾರ. ಅಲ್ಲಿ ಹೂಡಿಕೆಯೆಲ್ಲ ಬಡವರಿಂದಲೇ ಬರುವುದರಿಂದ, ಬಡವರು ಆ ಸಂಸ್ಥೆಯಿಂದ ಪಡೆಯುವ ಲಾಭಾಂಶ ಅವರಿಗೇ ಹೋಗಿ ಒಂದು ರೀತಿಯ ಸಮತಾಭಾವ ಉಂಟಾಗುತ್ತದೆಂದು ಯೂನಸ್ ವಾದಿಸುತ್ತಾರೆ.

ಅರ್ಥಶಾಸ್ತ್ರವನ್ನು ಓದಿರುವ ಯಾರಾದರೂ ಈ ರೀತಿಯ ವ್ಯಾಪಾರ ವಿಧಾನದಲ್ಲಿರುವ ತೊಡಕುಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಹೇಗೆ ಸಾಮಾಜಿಕ ವ್ಯಾಪಾರ ಸಹಜ ಗತಿಯಲ್ಲಿ ಬೆಳೆಯುವುದಿಲ್ಲ, ಹೇಗೆ ಯೂನಸ್ ವಿಚಾರಗಳು ಸಹಜ ಮಾನವ ಪ್ರವರ್ತನೆಯಾದ ’ಸ್ವಾರ್ಥಪರತೆ’ಯಿಂದ ದೂರವಾಗಿದೆ ಎನ್ನುವುದನ್ನು ವಾದಿಸಿ ತೋರಬಹುದು. ಸಾಲದ್ದಕ್ಕೆ ವಿಕ್ರಂ ಆಕುಲಾ ಥರದ ವ್ಯಕ್ತಿಗಳು ಗ್ರಾಮೀಣ್ ಬ್ಯಾಂಕಿನ ಬೆಳವಣಿಗೆಯ ಗತಿಯನ್ನೂ ಎಸ್.ಕೆ.ಎಸ್ ಸಂಸ್ಥೆ ಬೆಳೆದ ಗತಿಯನ್ನೂ ತಾಳೆ ಹಾಕಿ, ಲಾಭಾಂಶದ ಆಮಿಷವಿದ್ದಾಗ ವ್ಯಾಪಾರಗಳು ಹೇಗೆ ಸಹಜವಾಗಿ ಬೆಳೆದು ವಿಕಾಸದ ಗತಿಯನ್ನು ತೀವ್ರಗೊಳಿಸುತ್ತದೆನ್ನುವುದನ್ನು ನಿದರ್ಶನದ ಮೂಲಕ ತೋರಿಸಬಹುದು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಯೂನಸ್ ಆ ಸೂತ್ರಗಳಿಗೆ ವಿರುದ್ಧವಾಗಿ ವಾದಿಸುವುದನ್ನ ಲೇವಡಿ ಮಾಡಲೂ ಬಹುದು. ಯಾವ ರ್‍ಯಾಷನಲ್ ವ್ಯಕ್ತಿಯೂ ಯೂನಸ್ ಅವರ ವಾದದ ಪ್ರಕಾರ ಸಂಸ್ಥೆಗಳು ಸ್ಥಾಪಿಸಿದರೆ, ಉಳಿದು ಬೆಳೆಯುತ್ತವೆ ಅನ್ನುವುದನ್ನ ನಂಬಲು ಸಾಧ್ಯವಿಲ್ಲ.

ಆದರೂ, ಯೂನಸ್ ತಮ್ಮ ವಿಚಾರಗಳನ್ನು ಮಂಡಿಸುವಲ್ಲಿ ಹಿಂಜರಿಯುವುದಿಲ್ಲ. ಯೂನಸ್ ವಾದದಲ್ಲಿರುವ - ಹಾಗೂ ವಿಕ್ರಂ ವಾದದಲ್ಲಿ ಕಾಣಸಿಗದ ಮೂಲ ಅಂಶವೇನು? ಏಕೆಂದರೆ ಲಾಭ ಹೆಚ್ಚಾದಷ್ಟೂ ಆ ವ್ಯಾಪಾರದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಅನ್ನುವುದು ಸ್ವಯಂ-ವೇದ್ಯವಾಗಿದೆ. ಆದರೆ ಬಡವರೇ - ಹಾಗೂ ಕೇವಲ ಬಡವರು ಮಾತ್ರವೇ - ನಿಮ್ಮ ವ್ಯಾಪಾರದ ಗ್ರಾಹಕರಾಗಿದ್ದರೆ ಅದರಲ್ಲಿ ಒಟ್ಟಾರೆ ನ್ಯಾಯದ ಪ್ರಶ್ನೆ ಉದ್ಭವವಾಗುತ್ತದೆ. ಅತೀ ಬಡವರಿಗೆ ಸಾಲ ನೀಡಿ ಅದರಿಂದ ಆರ್ಜಿಸಿದ ಬಡ್ಡಿಯ ಲಾಭದಲ್ಲಿ ಒಂದು ದೊಡ್ಡ ಸೌಧವನ್ನು ಕಟ್ಟಿ ಅದರಲ್ಲಿ ಜೀವಿಸಿದರೆ - ಆ ಲಾಭವನ್ನು ನ್ಯಾಯವಾದ ಮಾರ್ಗದಲ್ಲಿ ಆರ್ಜಿಸಿದ್ದರೂ - ಅನೇಕ ಹುಬ್ಬುಗಳು ಮೇಲೆ ಹೋಗುವುದನ್ನು ನಾವು ಕಾಣಬಹುದು. ಈ ಪ್ರಶ್ನೆ ಬೇರೆ ವ್ಯಾಪಾರದಿಂದ ಧನಾರ್ಜನೆ ಮಾಡಿದಾಗ ಉದ್ಭವವಾಗುವುದಿಲ್ಲ. ಒಂದು ರೀತಿಯಲ್ಲಿ ಏನೂ ಇಲ್ಲದ ಜನರಿಂದ ಲಾಭ ಮಾಡಿ ಸುಖಜೀವನ ನಡೆಸಿದರೆ ಅದು ಇರುವವರ -ಇಲ್ಲದವರ ಬಡವ-ಬಲ್ಲಿದರ ನಡುವಿನ ವ್ಯತ್ಯಾಸವನ್ನು ತೀವ್ರಗೊಳಿಸಿ ತೋರಿಸುತ್ತದಲ್ಲದೆ, ಬಡವರಿಂದ ಬಲ್ಲಿದರು ಹೆಚ್ಚೆಚ್ಚು ಶ್ರೀಮಂತರಾಗುವುದನ್ನೂ ನಿದರ್ಶಿಸುತ್ತದೆ. ಹೀಗಾಗಿ ಆ ಲಾಭವನ್ನು ಗ್ರಾಹಕರೊಂದಿಗೆ ಹಂಚಿಕೊಂಡರೆ, ಅಥವಾ ಆ ಲಾಭವನ್ನು ವ್ಯಾಪಾರಿಗಳು ಸ್ವೀಕರಿಸದಿದ್ದರೆ - ಒಟ್ಟಾರೆ ಒಂದು ಸಮತಾಭಾವ ಉಂಟಾಗಿ ಅದರಿಂದ ಶಾಂತಿ ಉದ್ಭವವಾಗಬಹುದು ಅನ್ನುವುದು ಯೂನಸ್ ಅವರ ವಾದ.

ಆ ವಾದವನ್ನು ಒಪ್ಪಿದರೂ, ಮೂಲಭೂತವಾಗಿ ಸ್ವಾರ್ಥ ಮತ್ತು ಅತಿಯಾಸೆಯ ಸೂತ್ರಗಳ ಮೇಲೆ ಬದುಕುವ ಮಾನವಸಹಜ ಪ್ರವೃತ್ತಿಗೆ ಇದು ವಿರುದ್ಧವಾಗಿದೆ ಅನ್ನುವುದನ್ನು ನಾವು ಮನಗಾಣಬೇಕು. ಯೂನಸ್, ಮಹಾತ್ಮಾಗಾಂಧಿಯಂತಹ ದೊಡ್ಡ ಹೃದಯದ ವ್ಯಕ್ತಿಗಳು ಮಾತ್ರ ಈ ಸೂತ್ರವನ್ನು ಮೀರಿ, ಮಿತವಾದ ಆದಾಯದಲ್ಲಿ, ಮಿತವಾದ ಬಯಕೆಗಳೊಂದಿಗೆ ಜೀವಿಸಬಲ್ಲರಾದ್ದರಿಂದ ಯೂನಸ್ ವಾದಗಳನ್ನು ಒಂದು ರೊಮ್ಯಾಂಟಿಕ್ ಕನಸುಗಾರನ - ನಿಜಜೀವನದಲ್ಲಿ ಪ್ರದರ್ಶಿಸಲು ಸಾಧ್ಯವಾಗದ - ವಾದ ಎಂದು ತಳ್ಳಿಹಾಗಬಹುದು.

ಆದರೆ ಯೂನಸ್ ತಮ್ಮ ಈ ಕನಸುಗಳನ್ನ ಜನರಿಗೆ ಹೇಳಲು ಹಿಂಜರಿಯುವುದಿಲ್ಲ. ಬಡತನವನ್ನು ಸಂಗ್ರಹಾಲಕ್ಕೆ ಕಳಿಸುತ್ತೇನೆ ಎನ್ನುವ ಉದಾತ್ತ ಆದರೆ ಇಂಪ್ರಾಕ್ಟಿಕಲ್ ಆಗಿ ಕಾಣುವ ಕನಸನ್ನು ವಿವರಿಸುವುದಕ್ಕೆ ಹಿಂಜರಿಯುವುದಿಲ್ಲ. ಬಹುಶಃ ಈ ರೀತಿಯ ಆಶಾವಾದಿ ಕನಸುಗಳು ಮತ್ತು ಆ ಕನಸುಗಳ ಮೇಲಿನ ನಂಬಿಕೆಯಿಂದಾಗಿಯೇ ಯೂನಸ್ ಅಂತಹವರು ಯಶಸ್ವಿಯಾಗುತ್ತಾರೇನೋ. ಅವರ ಅಸಹಜ ಆರ್ಥಿಕ ಸೂತ್ರಗಳ ’ಸಾಮಾಜಿಕ ವ್ಯಾಪಾರ’ಗಳನ್ನು ಹುಟ್ಟುಹಾಕುವ ಪ್ರಯತ್ನವನ್ನು ಕನಸುಗಾರ ಯೂನಸ್ ಮಾಡುತ್ತಲೇ ಇದ್ದಾರೆ. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಲ್ಲದೇ ೨೪ ಇತರ ವ್ಯಾಪಾರಗಳನ್ನು ಆತ ತನ್ನ ಸೂತ್ರದನುಸಾರ ಪ್ರಾರಂಭಿಸಿದ್ದಾರೆ. ಎಲ್ಲವೂ ಸಫಲವಾಗಿಲ್ಲ. ಆದರೆ ಪ್ರಯತ್ನವೇ ಮಾಡದಿದ್ದರೆ ಸಫಲವಾಗುವುದು ಹೇಗೆ? ವೈಫಲ್ಯದಿಂದ ಪಾಠ ಕಲಿತು ಮತ್ತೆ ಪ್ರಯೋಗ ಮಾಡಬೇಕೆನ್ನುವುದೇ ಅವರ ಸೂತ್ರ.

ತಮ್ಮ ವಿಚಾರಗಳನ್ನು ಮಂಡಿಸುತ್ತಾ ಯೂನಸ್ ಹೀಗನ್ನುತ್ತಾರೆ "ನಾನು ಪ್ರಾರಂಭ ಮಾಡಿದ ಅನೇಕ ವರ್ಷಗಳ ನಂತರ ನನಗನ್ನಿಸುತ್ತಿರುವುದು ಇದು - ಬ್ಯಾಂಕುಗಳು ಹೇಗೆ ಕೆಲಸ ಮಾಡುತ್ತವೆಂದು ತಿಳಿಯದ ಅಜ್ಞಾನವೇ ನನ್ನನ್ನು ಈ ದಿಶೆಯಲ್ಲಿ ಅಟ್ಟಿದ ಅಸ್ತ್ರವಾಯಿತು. ಬ್ಯಾಂಕಿಂಗ್ ಪದ್ಧತಿಗಳನ್ನು ತಿಳಿಯದ, ಬ್ಯಾಂಕನ್ನು ನಡೆಸುವ ಬಗ್ಗೆ ಯಾವತರಬೇತಿಯನ್ನೂ ಪಡೆಯದಿದ್ದದ್ದರಿಂದ ನಾನು ಭಿನ್ನ ರೀತಿಯಲ್ಲಿ ಆಲೋಚಿಸಲು ಸಾಧ್ಯವಾಯಿತು. ಬಹುಶಃ ನಾನು ಬ್ಯಾಂಕಿಂಗ್ ತಿಳಿದಿದ್ದರೆ ಅದನ್ನು ಬಡವರಿಗೆ ಹೇಗೆ ಅನ್ವಯಿಸಬಹುದು ಅನ್ನುವುದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲವೇನೋ.."

ಹೀಗೆ ಜಗತ್ತಿನ ಅತೀ ಕಷ್ಟದ ಸವಾಲುಗಳನ್ನೆದುರಿಸಲು ಸುಲಭ ಮಾರ್ಗಗಳನ್ನು ಕಂಡುಕೊಳ್ಳಬಹುದು, ಆ ಮಾರ್ಗಗಳು ಅಸಹಜವೆನ್ನಿಸಿದರೂ, ಅದರಲ್ಲಿ ನಂಬುಗೆಯಿದ್ದರೆ, ಜಗತ್ತಿನ ಟೀಕೆಗೆ ತಲೆಬಾಗಿಸದೇ ಹಠ ಹಿಡಿದು ಮುಂದುವರೆದರೆ ಬಹುಶಃ ಅನಿರೀಕ್ಷಿತ ಸಾಫಲ್ಯ ಸಿಕ್ಕಬಹುದೆಂದು ಯೂನಸ್ ನಿರೂಪಿಸುತ್ತಾರೆ. ಅವರಿಗೆ ಬೇಕಾದ್ದದ್ದು ಮೂರೇ ವಿಚಾರಗಳು - ೧. ತಮ್ಮ ವಿಚಾರದ ಬಗ್ಗೆ ಅದಮ್ಯ ನಂಬುಗೆ, ೨.ಜಗತ್ತನ್ನು ಬದಲಾಯಿಸಲೇಬೇಕೆಂಬ - ಬಡತನವನ್ನು ಪ್ರಪಂಚದಿಂದ ಕಿತ್ತೊಗೆಯಬೇಕೆಂಬ ಹಠವಾದಿಯ ಕನಸು ಹಾಗೂ ೩. ಟನ್ನುಗಟ್ಟಲೆ ಸಂಯಮ. ಈ ಎಲ್ಲವನ್ನೂ ಯೂನಸ್ ಒಂದು ಬಾರಿಯಲ್ಲ, ಅನೇಕ ಬಾರಿ ತೋರಿಸಿದ್ದಾರೆ.


ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು


ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?

ಐಟಿಸಿ ಸಂಸ್ಥೆಯ ಈಚಿನ ಖ್ಯಾತಿ ಅವರು ರೈತರಿಗಾಗಿ ನಡೆಸುತ್ತಿರುವ ಈ-ಚೌಪಾಲ್ ಕಾರ್ಯಕ್ರಮದಿಂದಾಗಿ ಹೆಚ್ಚಿದೆ. ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ದು ಅದರಿಂದಾಗಿ ಒಳಿತು ಮಾಡಿರುವುದಕ್ಕಾಗಿ ಈ ಸಂಸ್ಥೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಚೌಪಾಲ್ ನಿಂದಾಗಿ ರೈತರಿಗೆ ಮಂಡಿಗೆ ಹೋಗುವುದಕ್ಕೆ ಮುನ್ನವೇ ಬೆಲೆಯ ಅರಿವಾಗುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸ್ಥಳದಲ್ಲೇ ಲಭ್ಯವಾಗುತ್ತದೆ. ಕೃಷಿಯಿಂದಾಗಿ ಬರುವ ಆದಾಯ ಹೆಚ್ಚುವುದರಲ್ಲೂ, ಖರ್ಚನ್ನು ಕಡಿಮೆ ಮಾಡುವುದರಲ್ಲೂ ಚೌಪಾಲ್ ಸಹಾಯಕವಾಗಿದೆ. ಇದರಿಂದಾಗಿ ರೈತರ ಇಳುವರಿಯನ್ನು ಕೊಳ್ಳುವ ಐಟಿಸಿಗೂ ಒಟ್ಟಾರೆ ಖರ್ಚು ಕಡಿಮೆಯಾಗಿ ಎಲ್ಲರೂ ಗೆಲ್ಲುವ ವಿನ್-ವಿನ್ ಪರಿಸ್ಥಿತಿ ಉಂಟಾಗಿದೆಯಂತೆ. ಹೀಗೆ ಐಟಿಸಿ ಅದ್ಭುತವಾದ ತಂತ್ರಜ್ಞಾನವನ್ನೂ ಲಾಭವನ್ನೂ ಒಳಿತಿಗೆ ಉಪಯೋಗಿಸಿದ ಸಂಸ್ಥೆಯಾಗಿ ಕೊಂಡಾಡಲ್ಪಡುತ್ತದೆ.

ಆದರೆ ಇದರಲ್ಲಿರುವ ವ್ಯಂಗ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ವಾರ್ಷಿಕ ವರದಿಯಲ್ಲಿ ಐಟಿಸಿಯ ಮುಖ್ಯಸ್ಥ ದೇವೇಶ್ವರ್ ತಮ್ಮ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಮಾತಾಡುತ್ತಾ ಸಂಸ್ಥೆಯ ವಿವಿಧ ವಿಭಾಗಗಳನ್ನು ಕೊಂಡಾಡುತ್ತಾರೆ. ಹಾಗೂ ಜಾಗತಿಕ ಹವಾಮಾನದಲ್ಲಾಗುತ್ತಿರುವ ಏರುಪೇರು ಮತ್ತು ಪರಿಸರದ ಬಗ್ಗೆ ಮಾತನಾಡುತ್ತಾರೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಈ ಮಧ್ಯೆ ನಮ್ಮ ಕಣ್ಣಿಗೆ ಕಾಣದಿರಬಹುದಾದ ವಿವರಗಳು - ತಂಬಾಕು ವ್ಯಾಪಾರದಿಂದ ಕಳೆದ ವರ್ಷದ ವ್ಯಾಪಾರದ ಆಧಾರದ ಮೇಲೆ ಬೆಳೆದ ಮಾರಾಟ ರೂ ೧೩೦೦ ಕೋಟಿ, ಒಟ್ಟಾರೆ ಮಿಕ್ಕ ವ್ಯಾಪಾರಗಳಿಂದ ಹೆಚ್ಚಾದ ಮಾರಾಟ ರೂ.೫೦೦ ಕೋಟಿ. ತಂಬಾಕಿನಿಂದ ಬಂದ ಲಾಭಾಂಶ ಸುಮಾರು ರೂ.೪,೨೦೦ ಕೋಟಿ, ಮಿಕ್ಕೆಲ್ಲ ವ್ಯಾಪಾರಗಳಿಂದ ಬಂದ ಲಾಭಾಂಶ ಸುಮಾರು ರೂ.೪೦೦ ಕೋಟಿ. ಆದರೂ ಒಟ್ಟಾರೆ ಲಾಭಾಂಶದ ೮೯% ತರುವ ತಂಬಾಕಿನ ವ್ಯಾಪಾರದ ಬಗ್ಗೆ ಮುಖ್ಯಸ್ಥರು ಒಂದೂ ಪದವನ್ನು ತಮ್ಮ ಭಾಷಣದಲ್ಲಿ ಆಡುವುದಿಲ್ಲ. ಯಾಕೆಂದರೆ ತಾವು ’ಒಳಿತು’ ಮಾಡಿ ಲಾಭ ಮಾಡುತ್ತಿರುವ ಸಂಸ್ಥೆ ಎಂದು ಹೇಳಿಕೊಳ್ಳುವ, ಅದನ್ನು ಚೌಪಾಲ್ ವ್ಯಾಪಾರಗಳಂತಹ ಪ್ರಯೋಗಗಳಿಂದ ತೋರಿಸಿಕೊಳ್ಳುವ ತುರ್ತು ಇರುವ ಸಂಸ್ಥೆ ಕ್ಯಾನ್ಸರಿನಂತಹ ಭಯಾನಕ ರೋಗವನ್ನುಂಟು ಮಾಡುವ ತಂಬಾಕು ವ್ಯಪಾರವಿರುವಾಗಲೂ ಈ ಸಂಸ್ಥೆ ಮಾಡುತ್ತಿರುವ ಒಳಿತನ್ನು ನಾವು ಹೇಗೆ ಗ್ರಹಿಸಬೇಕು? ತಂಬಾಕಿನ ಲಾಭದಿಂದ ಮಿಕ್ಕ ವ್ಯಾಪಾರಗಳ ಒಳಿತು ನಡೆಯುತ್ತಿದೆ ಅನ್ನಬಹುದೇ?


ಫ್ಯಾಬ್ಇಂಡಿಯಾ ಅನ್ನುವ ಸಂಸ್ಥೆಯನ್ನು ಜಾನ್ ಬಿಸೆಲ್ ೧೯೬೦ನೇ ಇಸವಿಯಲ್ಲಿ ಸ್ಥಾಪಿಸಿದರು. ಜಾನ್ ಬಿಸೆಲ್ ಕೈಮಗ್ಗದ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಒಳಿತನ್ನು ಯೋಚಿಸುತ್ತಲೇ ಫ್ಯಾಬ್‍ಇಂಡಿಯಾದ ಮೂಲಕ ವ್ಯಪಾರವನ್ನು ಮಾಡಲು ಹೊರಟವರು. ಹೀಗಾಗಿ ಫ್ಯಾಬ್‍ಇಂಡಿಯಾದ ವ್ಯಾಪಾರಕ್ಕೆ ಒಂದು ರೀತಿಯ ವ್ಯಕ್ತಿತ್ವವನ್ನು ಒದಗಿಸಿದ, ಹಾಗೂ ಆ ಮೂಲಕ ಕುಶಲಕರ್ಮಿಗಳಿಗೆ ಕೆಲಸವನ್ನು ಕಲ್ಪಿಸಿಕೊಟ್ಟ - ಒಳಿತು ಮಾಡುತ್ತಲೇ ಲಾಭವನ್ನೂ ಆರ್ಜಿಸುವ ಕೆಲಸವನ್ನು ಆತ ಪ್ರಾರಂಭಿಸಿದರು.

ಖಾದೀ ಗ್ರಾಮೋದ್ಯೋಗ ಸಂಸ್ಥೆಗಳು, ಸರಕಾರಗಳು ನಡೆಸುವ ಹ್ಯಾಂಡ್‍ಲೂಮ್ ಹೌಸ್, ಕೋ-ಆಪ್ಟೆಕ್ಸ್, ಪ್ರಿಯದರ್ಶಿನಿ, ಆಪ್ಕೋಗಳನ್ನೂ - ಫ್ಯಾಬ್‍ಇಂಡಿಯಾ ಅಂಗಡಿಗಳನ್ನೂ ನೋಡಿದರೆ ಎರಡಕ್ಕೂ ಇರುವ ವ್ಯತ್ಯಾಸ ನಮಗೆ ವೇದ್ಯವಾಗುತ್ತದೆ. ಹೀಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಗ್ರಾಮೀಣ ಕುಶಲ ಕರ್ಮಿಗಳಿಗೆ ಹೆಚ್ಚು ಉಪಾಧಿಯನ್ನು ಕಲ್ಪಿಸುವ ಕೆಲಸವನ್ನು ಫ್ಯಾಬ್‍ಇಂಡಿಯಾ ತನ್ನ ಮಟ್ಟಿಗೆ ತಾನು ಮಾಡುತ್ತಿತ್ತು. ಪಾರ್ಟಿಗಳಿಗೆ ಹೋಗುವ ದೆಹಲಿಯ ಸಿರಿವಂತರಲ್ಲಿ ಫ್ಯಾಬ್‍ಇಂಡಿಯಾ ಕುರ್ತಾಧರಿಸಿ ಹೋಗುವುದೂ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗುವ ಮಟ್ಟಿಗೆ ಫ್ಯಾಬ್‍ಇಂಡಿಯಾ ಬೆಳೆದುಬಿಟ್ಟಿತು. ಆದರೆ ೧೯೬೦ರಿಂದ ೧೯೯೪ರವರೆಗೆ ಫ್ಯಾಬ್‍ಇಂಡಿಯಾ ದೆಹಲಿಯಲ್ಲಿ ಒಂದು ಅಂಗಡಿಯ ಮೂಲಕ ವ್ಯಾಪಾರ ಮಾಡುತ್ತಿತ್ತು. ೧೯೯೪ರಲ್ಲಿ ಜಾನ್ ಬಿಸೆಲ್ ಮಗ ವಿಲಿಯಂ ಬಿಸೆಲ್ ಕಂಪನಿಯ ರೂವಾರಿಯಾದರು. ಅಲ್ಲಿಂದ ಫ್ಯಾಬ್‍ಇಂಡಿಯಾದ ಬೆಳವಣಿಗೆಯ ಕಥೆ ಪ್ರಾರಂಭವಾಗಿ ಇಂದು ಭಾರತದಾದ್ಯಂತ ಈ ಲಾಭಾರ್ಜನೆಯ ವ್ಯಾಪಾರ ೧೦೪ ಅಂಗಡಿಗಳ ಮೂಲಕ ನಡೆಯುತ್ತಿದೆ.

ಇದ್ದಕ್ಕಿದ್ದ ಹಾಗೆ ಫ್ಯಾಬ್‍ಇಂಡಿಯಾದ ವ್ಯಾಪಾರದ ಬಗ್ಗೆ ನಮಗೆ ಯಾಕೆ ಕುತೂಹಲ ಉಂಟಾಗಬೇಕು? ಕಾರಣವಿಷ್ಟೇ - ಒಳಿತನ್ನೂ ಲಾಭವನ್ನೂ ಆರ್ಜಿಸುವ ಉದ್ದೇಶ ಹೊತ್ತ ಸಂಸ್ಥೆಗಳು ಒಳಿತು-ಲಾಭಗಳ ಸಮತೌಲ್ಯವನ್ನು ಕಾಪಾಡುವುದರಲ್ಲಿ ತುಸು ವಿಫಲರಾಗಬಹುದಾದ್ದರಿಂದ ಅಂಥಹ ಸಂಸ್ಥೆಯ ಯಶಸ್ಸನ್ನು ತೀಕ್ಷ್ಣ ಪರಿಶೀನನೆಗೆ ಹಚ್ಚುವುದು ಸಹಜವೇ ಆಗುತ್ತದೆ. ಆದರೆ ಈ ರೀತಿಯ ಸಂಸ್ಥೆಗಳು ’ಬೆಳವಣಿಗೆ’ಯ ಪಥ ಹಿಡಿದಾಗ, ಕುಶಲಕರ್ಮಿಗಳ ಬೆಳವಣಿಗೆಯ ಗತಿಗಿಂತಾ ಹೆಚ್ಚಿನ ಗತಿಯಲ್ಲಿ ಸಂಸ್ಥೆ ಬೆಳೆಯಲು ತೊಡಗಿದಾಗ ’ಒಳಿತು’ ಹಿನ್ನೆಲೆಗೆ ಹೋಗಿ ’ಲಾಭ’ ಮುಂಚೂಣಿಗೆ ಬರುತ್ತದೆ. ಹೀಗಾಗಿಯೇ ಫ್ಯಾಬ್‍ಇಂಡಿಯಾದ ಈಚಿನ ಬೆಳವಣಿಗೆಯ ಗತಿಯಲ್ಲಿ ನೇಕಾರರು - ಕುಶಲ ಕರ್ಮಿಗಳಿಂದ ಬಂದ ಉತ್ಪತ್ತಿಯನ್ನು ಮಾತ್ರ ಮಾರುತ್ತಿದ್ದ ಸಂಸ್ಥೆ ನಿಧಾನವಾಗಿ ನಾವು ಮಾರುವ ಯಾವುದೇ ವಸ್ತುವಿನಲ್ಲಿ ಕುಶಲ ಕರ್ಮಿಗಳ ’ಕೆಲಸದ’ ಅಂಶ ಇರುತ್ತದೆ ಅನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಹೇಳಿದಾಗ ಮಿಲ್ಲಿನ ಬಟ್ಟೆಗೆ ಹಾಕಿದ ಬ್ಲಾಕ್ ಪ್ರಿಂಟು, ಅಥವಾ ಕೈಯಿಂದ ಮಾಡಿದ ಕಸೂತಿಯ ವಸ್ತ್ರಗಳೂ ಆ ವ್ಯಾಪಾರಕ್ಕೆ ಸೇರುತ್ತವೆ, ಜೊತೆಗೆ ಸಂಬಂಧವೇ ಇಲ್ಲದ ಆರ್ಗ್ಯಾನಿಕ್ ಉಪ್ಪಿನಕಾಯಿ ಇತರ ವಸ್ತುಗಳು ಆ ವ್ಯಾಪಾರದಲ್ಲಿ ಮನೆ ಮಾಡುತ್ತವೆ. ಹೀಗೆ ಒಳಿತು ಕ್ರಮಕ್ರಮೇಣ ಹಿನ್ನೆಲೆಗೆ ಹೋಗಿ ಲಾಭ ಮತ್ತು ಬೆಳವಣಿಗೆ ಮುಖ್ಯವಾಗುತ್ತವೆ. ಹೀಗಾಗಿ ಈ ಇಂಥ ಸಂಸ್ಥೆಗಳು ಒಳಿತನ್ನು ಮಾಡುವುದನ್ನು ಮುಂದುವರೆಸಿದರೂ ಈ ಕಷ್ಟದ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗಿದೆ! ಹೌದು ಇಂದಿಗೂ ಫ್ಯಾಬ್‍ಇಂಡಿಯಾ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅದರ ಒಟ್ಟಾರೆ ಮಾರಾಟದಲ್ಲಿ ಕುಶಲಕರ್ಮಿಗಳ ಪ್ರತಿಶತ ಕಡಿಮೆಯಾಗುತ್ತಿದೆ. ಹೀಗೆ ಲಾಭ ಒಳಿತನ್ನು ನಿಧಾನವಾಗಿ ಕಬಳಿಸಿಬಿಡುತ್ತದೆ.

ಅದೇ ಲಾಭ ಗಳಿಸುವುದೇ ಒಳಿತು ಮಾಡಲು ಅನ್ನುವಂಥಹ ಸಂಸ್ಥೆಗಳೂ ನಮ್ಮಲ್ಲಿವೆ. ಇಂಥ ಸಂಸ್ಥೆಗಳಲ್ಲಿ ಬಂಡವಾಳ ಮತ್ತು ಲಾಭ ಮುಂಚೂಣಿಗೆ ಬರದೇ ಮೂಲ ಉದ್ದೇಶ ಒಳಿತು ಮಾಡುವುದೇ ಆಗಿದೆ. ಮದುರೈನಲ್ಲಿರುವ ಅರವಿಂದ ಐ ಕೇರ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಸ್ಥಾಪಿಸಿದ [ಹಾಗೂ ಈಚೆಗೆ ತೀರಿಕೊಂಡ] ಗೋವಿಂದಪ್ಪಾ ವೆಂಕಟಸ್ವಾಮಿಯವರ ಉದ್ದೇಶ ಜನರ ದೃಷ್ಟಿಯನ್ನು ಉತ್ತಮಗೊಳಿಸುವುದೇ ಆಗಿತ್ತು. ಆತನಿಗೆ ಅದರಿಂದ ಯಾವ ಲಾಭವೂ ಬೇಕಿರಲಿಲ್ಲ. ಆದರೆ ಆತ ಕೇಳುತ್ತಿದ್ದ ಪ್ರಶ್ನೆಗಳೆಲ್ಲಾ ಲಾಭಗಳಿಸುವ ಸಂಸ್ಥೆಗಳು ಕೇಳಬಹುದಾದ ಪ್ರಶ್ನೆಗಳೇ. ಹೇಗೆ ಕುಶಲತೆಯಿಂದ ಕೆಲಸ ಮಾಡಬಹುದು, ಎಲ್ಲಿ ಖರ್ಚನ್ನು ಕಡಿಮೆ ಮಾಡಬಹುದು, ಗುಣಮಟ್ಟವನ್ನು ಹೇಗೆ ಕಾಯ್ದಿಟ್ಟುಕೊಳ್ಳಬಹುದು.. ಹೀಗೆ ಅವರು ಕೇಳಿದ ಪ್ರಶ್ನೆಗಳ ಫಲವಾಗಿ ಅರವಿಂದ್ ಐ ಕೇರ್ ಸಂಸ್ಥೆಗಳು ಗುಣಮಟ್ಟದ ಸೇವೆಗಳನ್ನೊದಗಿಸುತ್ತಾ ತನ್ನ ಲಾಭಾಂಶವನ್ನು ಶ್ರೀಮಂತರಿಂದ ಗಳಿಸಿ ಬಡವರಿಗೆ ಒಳಿತನ್ನು ಮಾಡುತ್ತಿದೆ. ಅಕಸ್ಮಾತ್ ಹೆಚ್ಚಿನ ಲಾಭಾಂಶವನ್ನು ಗಳಿಸಿದರೂ ಅದನ್ನು ಹಂಚುವ ಭಾರ ಆ ಸಂಸ್ಥೆಯ ಮೇಲೆ ಇಲ್ಲವಾದ್ದರಿಂದ ಆ ಸಂಸ್ಥೆಯ ಬೆಳವಣಿಗೆಯ ಗತಿ, ಫ್ಯಾಬ್‍ಇಂಡಿಯಾದ ಲಾಭಾರ್ಜನೆಯ ಬೆಳವಣಿಗೆಯ ಗತಿಗಿಂತ ಭಿನ್ನವಾಗಿರುತ್ತದೆ. ಆದರೂ ಅರವಿಂದ್ ಥರದ ಸಂಸ್ಥೆಗಳು ಒಳಿತನ್ನು ಮಾಡಲು ಯಾರ ಅನುದಾನವನ್ನೂ ಅಪೇಕ್ಷಿಸುವಿದಿಲ್ಲ.

ಒಳಿತಿಗೂ ಲಾಭಕ್ಕೂ ಇರುವ ಸಂಬಂಧ ಹೀಗೆ ಬಹಳ ಗಹನವಾದದ್ದು!



ಚಿಕ್ಕಸಾಲಕ್ಕೆ ವಲಸೆಬಂದ ವಿಕಾಸವಾದಿಗಳು



ಎರಡು ದಶಕಗಳ ಕೆಳಗೆ ಮೈಕ್ರೊಫೈನಾನ್ಸ್ [ಚಿಕ್ಕಸಾಲ]ದ ಮೊದಲ ಅಲೆ ಪ್ರಾರಂಭವಾಯಿತು ಎನ್ನಬಹುದು. ಚಿಕ್ಕಸಾಲವೆಂದರೆ ಸ್ವ-ಸಹಾಯ ಗುಂಪುಗಳೆಂದು ನಾವುಗಳು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ನಮ್ಮ ದೇಶಕ್ಕೆ ನಮ್ಮದೇ ಆದ ಸಹಕಾರೀ ತತ್ವದ ಮೇಲೆ ಆಧಾರಿತವಾದ ಮಹಿಳೆಯರಿಂದಲೇ ಚಲಾಯಿಸಲ್ಪಡುತ್ತಿದ್ದ ಲಕ್ಷಾಂತರ ಗುಂಪುಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿದ್ದುವು. ಈ ಗುಂಪುಗಳ ಜೊತೆಗೆ ಅಹಮದಾಬಾದಿನ ಸೇವಾ ಬ್ಯಾಂಕನ್ನು ಚಿಕ್ಕಸಾಲಿಗರೆಂದು ಕರೆಯುವುದು ಪ್ರತೀತಿಯಾಗಿತ್ತು. ಈ ಗುಂಪುಗಳನ್ನು ಆಯೋಜಿಸುತ್ತಿದ್ದ ಪ್ರದಾನ್, ಮೈರಾಡಾ, ಧಾನ್ ಫೌಂಡೇಷನ್, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ವಿಕಾಸ ವಿಭಾಗದಂತಹ ಸ್ವಯಂ ಸೇವಾ ಸಂಸ್ಥೆಗಳು, ತಮ್ಮದೇ ಮಹಿಳಾ ಸೇವಾ ಸಹಕಾರಿ ಬ್ಯಾಂಕಿನ ಮೂಲಕ ಚಿಕ್ಕಸಾಲವನ್ನು ನೀಡುತ್ತಿದ್ದ ಅಹಮದಾಬಾದಿನ ಸೇವಾ ಈ ಎಲ್ಲ ಸಂಸ್ಥೆಗಳಿಗೂ ತಾವು ನಡೆಸುತ್ತಿದ್ದ ವಿಕಾಸ ಕಾರ್ಯದ ಒಂದು ಭಾಗವಾಗಿ, ಬ್ಯಾಂಕುಗಳು ನೀಡುವ ವಿತ್ತೀಯ ಸೇವೆಗೆ ಪೂರಕವಾಗಿ, ಹಾಗೂ ಬ್ಯಾಂಕುಗಳು ಇಂಥ ಸೇವೆಗಳನ್ನು ಬಡವರಿಗೆ ನೀಡದಿದ್ದಾಗ ಅವುಗಳಿಗೆ ಸವಾಲಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತಿದ್ದುವು. 

ಸ್ವ-ಸಹಾಯ ಗುಂಪುಗಳನ್ನು ಪಾಶ್ಚಾತ್ಯಲೋಕ ತುಸು ಅನುಮಾನದಿಂದಲೇ ನೋಡುತ್ತಿದ್ದುವು - ಹಾಗೂ ನೋಡುತ್ತಿವೆ. ಈ ಅನುಮಾನಕ್ಕೆ ಪಾಶ್ಚಾತ್ಯಲೋಕದ ಕಾರಣ ಹೀಗಿದೆ: ಸ್ವ-ಸಹಾಯ ಗುಂಪುಗಳನ್ನು ಆಯೋಜಿಸುವವರು ಹೊರಗಿನ ಸ್ವಯಂ-ಸೇವಾ ಸಂಸ್ಥೆಗಳು. ಅವುಗಳಿಗೆ ಹೊರಗಿನಿಂದ ಧನಸಹಾಯ ಬರುತ್ತದಾದ್ದರಿಂದ, ಸ್ವ-ಸಹಾಯ ಗುಂಪುಗಳ ಒಟ್ಟಾರೆ ಖರ್ಚುಗಳು ಒಂದು ಜಾಗದಲ್ಲಿ ಇಡಿಯಾಗಿ ಸಿಗುವುದಿಲ್ಲವಾದ್ದರಿಂದ ಇದಕ್ಕೆ ಹಿಂಬಾಗಿಲಿನಿಂದ ಸಬ್ಸಿಡಿ ಕೊಟ್ಟಂತಾಗುತ್ತದೆ ಅನ್ನುವುದು ಆ ಲೋಕದ ವಾದ. ಸ್ವಯಂಭೂ ಆಗಿ ಗುಂಪುಗಳು ಉದ್ಭವವಾದರೆ ಅವುಗಳ ಉಸ್ತುವಾರಿಯ ಖರ್ಚು ಇನ್ನೂ ಹೆಚ್ಚೆನ್ನುವ ವಾದವನ್ನು ಒಪ್ಪುತ್ತಲೇ ನಾವು ಪಾಶ್ಚಾತ್ಯ ಲೋಕದ ಅನುಮಾನಗಳನ್ನು ಪಕ್ಕಕ್ಕಿಟ್ಟು ಮುನ್ನಡೆಯಬೇಕಾಗಿದೆ.

ಈಗ ಒಂದು ದಶಕದಿಂದಾದಿಯಾಗಿ ನಮಗೆ ಬೇರೊಂದೇ ಮಾದರಿಯ [ಎರಡನೆಯ ಅಲೆಯ] ಚಿಕ್ಕಸಾಲಿಗರು ಕಾಣಸಿಗುತ್ತಿದ್ದಾರೆ. ಈ ಚಿಕ್ಕಸಾಲಿಗರು ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕಿನ ಮಾದರಿಯನ್ನು ಕಾರ್ಯರೂಪಕ್ಕಿಳಿಸಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಜೊತೆಯಾಗಿ ಪಾಶ್ಚಾತ್ಯಲೋಕದಿಂದ ಆಮದಾದ ಬಂಡವಾಳ-ಆಧಾರಿತ ಮಾರುಕಟ್ಟೆಯ ಸೂತ್ರಗಳ ಮೇಲೆ ನಡೆವ ಒಂದು ಹೊಸ ಮಾದರಿಯನ್ನು ಮೈಗೂಡಿಸಿಕೊಂಡು ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವತ್ತ ಹೊಸ ಧಂಧೆಯನ್ನು ಪ್ರಾರಂಭಮಾಡಿದ್ದಾರೆ. ಈ ಎಲ್ಲ ಸಂಸ್ಥೆಗಳ ಹಿನ್ನೆಲೆ ಕುತೂಹಲದಿಂದ ಕೂಡಿದ್ದು. ಮೊದಲಿಗೆ ಬಡವರಿಗೆ ಸೇವೆಗಳನ್ನು ಒದಗಿಸಬೇಕೆಂದು ಪ್ರಾರಂಭ ಮಾಡಿದ ಈ ಸಂಸ್ಥೆಗಳು ಆ ಸೇವೆಯನ್ನೊದಗಿಸುತ್ತಲೇ - ಲಾಭವನ್ನೂ ಮಾಡಬಹುದು ಅನ್ನುವ ಸತ್ಯವನ್ನು ಕಂಡುಕೊಂಡವು. ಹೀಗೆ ಆರ್ಥಿಕ ಚೌಕಟ್ಟಿನ ಬುಡದಲ್ಲಿ [bottom of the pyramid] ಇರುವ ಮಾರುಕಟ್ಟೆಯ ಅವಕಾಶವನ್ನು ಗಳಿಸಿ ಬಡವರಿಗೆ ಸೇವೆ ಒದಗಿಸುತ್ತಲೇ ಲಾಭವನ್ನೂ ಗಿಟ್ಟಿಸಬಹುದಾದ ಸಾಧ್ಯತೆಗಳನ್ನು ಇವರುಗಳು ಕಂಡುಕೊಂಡರು.

ಈ ಜನರ ಹಿನ್ನೆಲೆ ಕುತೂಹಲದ್ದು. ಹೈದರಾಬಾದಿನಲ್ಲಿ ಪ್ರಾರಂಭವಾದ ಎಸ್.ಕೆ.ಎಸ್, ಷೇರ್, ಸ್ಪಂದನಾ, ಬೆಂಗಳೂರಿನಲ್ಲಿ ಪ್ರಾರಂಭವಾದ ಗ್ರಾಮೀಣ ಕೂಟ, ತಮಿಳುನಾಡಿನಲ್ಲಿನ ಆಸಾ, ಬಂಗಾಳದಲ್ಲಿನ ವಿಲೇಜ್ ವೆಲ್ಫೇರ್ ಸೊಸೈಟಿ ಮತ್ತು ಬಂಧನ್ - ಹೀಗೆ ಈ ಎಲ್ಲ ಸಂಸ್ಥೆಗಳ ಹಿಂದಿನ ಜನ ಸ್ವಯಂಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿ, ವಿಕಾಸದಬಗ್ಗೆ ತಲೆಕೆಡಿಸಿಕೊಂಡವರು. ಮೂಲಭೂತವಾಗಿ ಈ ಸಂಸ್ಥೆಗಳ ಜನರ ಬಳಿ ಇದ್ದದ್ದು ಬಡವರ ಬದುಕಿನ ಬಗೆಗಿನ ಜ್ಞಾನ, ಜನರ ಸಂಪರ್ಕ, ಹಾಗೂ ಹಳೆಯ ಕೆಲಸದ ಒಳ್ಳೆಯ ಹೆಸರು. ಆದರೆ ಇವರುಗಳ ಬಳಿ ಆರ್ಥಿಕ ಬಂಡವಾಳ ಇರಲಿಲ್ಲ. ಯಾರೂ ಶ್ರೀಮಂತರೂ ಅಲ್ಲ, ವ್ಯಾಪಾರ ಮನೋಭಾವದ ಕುಟುಂಬಕ್ಕೆ ಸಂದವರೂ ಅಲ್ಲ, ವ್ಯಾಪಾರಿಗಳೂ ಆಗಿರಲಿಲ್ಲ. ಆದರೆ ಅವರುಗಳಿಗೆ ಬಹುಶಃ ಸ್ವ-ಸಹಾಯ ಗುಂಪುಗಳ ಮೊದಲ ಅಲೆಯ ಕೆಲಸ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಸ್ವ-ಸಹಾಯ ಗುಂಪುಗಳ ಕೆಲಸಮಾಡಿದಾಗ ಅದರ ಫಲ ಸುಲಭವಾಗಿ ಕಾಣುವುದಿಲ್ಲ. ಅದನ್ನು ಅಳೆಯುವುದೂ ಕಷ್ಟ. ಹಾಗೂ ಇವರ ಕೆಲಸಕ್ಕೂ - ಫಲಿತಕ್ಕೂ ಕಾರ್ಯಕಾರಣ ಸಂಬಂಧ ಏರ್ಪಡಿಸುವುದು ಸರಳವೂ ಆಗಿರಲಿಲ್ಲ. ಆದರೆ ಗ್ರಾಮೀಣ್ ಮಾದರಿಯ ಚಿಕ್ಕಸಾಲ ಒಂದು ಚೌಕಟ್ಟಿನಲ್ಲಿ ನಡೆಯುತ್ತದೆ ಹಾಗೂ ಒಂದು ಶಿಸ್ತಿನಿಂದ ಕೂಡಿದ್ದಾಗಿದೆ. ಹೀಗಾಗಿ ಬಡವರಿಗೆ ಸಾಲ ಕೊಟ್ಟು ವಾಪಸ್ಸು ಪಡೆಯುವುದು ಸಾಧ್ಯ ಎನ್ನುವುದನ್ನು ಈ ಚಿಕ್ಕಸಾಲಿಗರು ನಿರೂಪಿಸಿದರು.

ಒಂದು ನಿಟ್ಟಿನಲ್ಲಿ ಈ ಎರಡನೆಯ ಅಲೆಯ ಚಿಕ್ಕಸಾಲಿಗರು ಬ್ಯಾಂಕುಗಳು ಪ್ರವೇಶ ಮಾಡಲು ಸಾಧ್ಯವಾಗದ ಒಂದು ಕ್ಷೇತ್ರಕ್ಕೆ ಪ್ರವೇಶ ಮಾಡಿ - ಹೀಗೂ ವಿತ್ತೀಯ ಸೇವೆಗಳನ್ನು ಒದಗಿಸಬಹುದು ಅನ್ನುವುದನ್ನು ನಿರೂಪಿಸಿದರು. ಚಿಕ್ಕಸಾಲದ ಈ ಕ್ರಾಂತಿ ನಿರೂಪಿಸಿದ್ದು ಆ ವರೆಗೂ ನಾವು ಒಪ್ಪಿಕೊಳ್ಳಲು ತಯಾರಿಲ್ಲದ ಎರಡು ವಿಚಾರಗಳನ್ನು - ಬಡವರಿಗೆ ಸಾಲ ನೀಡಿದರೆ - ಅದನ್ನು ಮರುಪಾವತಿ ಮಾಡುವ ಚೌಕಟ್ಟು ಒದಗಿಸಿದಾಗ - ಆ ಚೌಕಟ್ಟಿನಲ್ಲಿ ತುಸು ಪಾಪಪ್ರಜ್ಞೆ ಹಾಗೂ ಭಯದ ಅಂಶವನ್ನು ಸೇರಿಸಿದಾಗ - ವಸೂಲಿ ಕಷ್ಟದ ಮಾತಲ್ಲ ಅನ್ನುವುದು ಒಂದು ಅಂಶವಾದರೆ, ಎರಡನೆಯ ಅಂಶ ಪುಟ್ಟ ಸ್ಥರದಲ್ಲಿ ಸಾಲ ಕೊಡುವಾಗ ಬಡ್ಡಿದರ ಹೆಚ್ಚಿನ ಮಹತ್ವವನ್ನು ಒಳಗೊಂಡಿಲ್ಲ - ಬದಲಿಗೆ ೨೪ ರಿಂದ ೩೦ ಪ್ರತಿಶತ ಬಡ್ಡಿಯನ್ನು ಈ ಸಾಲಗಳ ಮೇಲೆ ಪಾವತಿ ಮಾಡಿ ಬಡವರು ಸಾಲ ಪಡೆಯಲು ತಯಾರಿದ್ದಾರೆ ಅನ್ನುವುದು.

ಈ ಸ್ಥರದ ಗ್ರಾಹಕರಿಗೆ ಸಾಲ ನೀಡುವುದೂ ವಸೂಲಿ ಮಾಡುವುದೂ ಹೆಚ್ಚಿನ ಖರ್ಚಿನ ಬಾಬತ್ತಾದ್ದರಿಂದ ಈ ರೀತಿಯ ಬಡ್ಡಿಯನ್ನು ಸ್ವೀಕರಿಸುವುದು ಸಹಜ ಎಂದು ಈ ಚಿಕ್ಕ ಸಾಲಿಗರು ವಾದಿಸಿದರು. ಸ್ವ ಸಹಾಯ ಗುಂಪುಗಳೂ ಈ ರೀತಿಯ ಬಡ್ಡಿಯನ್ನೇ ವಸೂಲು ಮಾಡುತ್ತಿವೆ ಎನ್ನುವುದನ್ನು ಈ ಜನ ನಮಗೆ ಎತ್ತಿ ತೋರಿಸಿದರು. ಹಾಗೂ ಸ್ಥಳೀಯವಾಗಿ ೩೬ ರಿಂದ ೪೮/೬೦ ಪ್ರತಿಶತ ಸಾಲ ಸಿಗುವ ಸಂದರ್ಭದಲ್ಲಿ ಸಾಲ ದೊರೆಯುವುದೇ ಕಷ್ಟದ ಮಾತಾದಾಗ ಮೊದಲಿಗೆ ಬೇಕಾದ್ದು ವಿತ್ತೀಯ ಸೇವೆ - ಬಡ್ಡಿಯ ಮಾತು ಆಮೇಲೆ ಅನ್ನುವ ವಾದ ಚಾಲ್ತಿಗೆ ಸರಳವಾಗಿ ಬಂದುಬಿಟ್ಟಿತು. ಒಬ್ಬ ತರಕಾರಿ ವ್ಯಾಪಾರಿ ದಿನದ ಪ್ರಾರಂಭದಲ್ಲಿ ಐನೂರು ರೂಪಾಯಿಯ ಸಾಲ ಪಡೆದು, ಅದಕ್ಕೆ [ಆ ದಿನಕ್ಕೆ] ಐವತ್ತು ರೂಪಾಯಿಯ ಬಡ್ಡಿ ಕಟ್ಟಿ, ಸಂಜೆಗೆ ಆರುನೂರು ರೂಪಾಯಿಯ ವ್ಯಾಪಾರ ಮಾಡಿದಲ್ಲಿ ಆ ವ್ಯಾಪಾರಕ್ಕೆ ಮೂಲತಃ ಪ್ರತಿದಿನ ೨೦ ಪ್ರತಿಶತದಂತೆ ಲಾಭ ಬರುವಾಗ ಚಿಕ್ಕಸಾಲಿಗರ ಬಡ್ಡಿ ಹೆಚ್ಚೆಂದು ಅನ್ನಿಸುವುದಿಲ್ಲ ಅನ್ನುವ ವಾದವನ್ನು ನನ್ನನ್ನೊಳಗೊಂಡಂತೆ ಅನೇಕರು ಮಂಡಿಸಿದರು. ಆದರೆ ಸ್ವ-ಸಹಾಯ ಗುಂಪುಗಳಿಗೂ ಎರಡನೆಯ ಅಲೆಯ ಗ್ರಾಮೀಣ್ ಮಾದರಿಯ ಚಿಕ್ಕಸಾಲಿಗರಿಗೂ ಒಂದು ಮೂಲಭೂತ ವ್ಯತ್ಯಾಸವಿತ್ತು ಸ್ವ-ಸಹಾಯ ಗುಂಪುಗಳು ಆರ್ಜಿಸಿದ ಲಾಭಾಂಶ ಅವರುಗಳ ನಡುವೆಯೇ ಇರುತ್ತಿತ್ತು ಆದರೆ ಈ ಚಿಕ್ಕಸಾಲಿಗರ ಲಾಭಾಂಶ ಸಂಸ್ಥೆಯ ಕೈವಶವಾಗುತ್ತಿತ್ತು.

ವಿತ್ತೀಯ ವ್ಯಾಪಾರದಲ್ಲಿ ತೊಡಗಿದ್ದ ವಿಕಾಸವಾದಿಗಳಿಗೆ ಈ ಲಾಭಾಂಶ ಎದ್ದುಕಾಣಿಸತೊಡಗಿತು. ಜೊತೆಗೆ ವ್ಯಾಪಾರವೂ ತೀವ್ರಗತಿಯಲ್ಲಿ ಬೆಳೆಯುತ್ತಿತ್ತು. ಹೀಗಾಗಿ ಚಿಕ್ಕಸಾಲಕ್ಕೆ ಬಂದ ವಿಕಾಸವಾದಿಗಳು ನಿಧಾನವಾಗಿ ದೂಡ್ಡ ಸಂಬಳಗಳನ್ನು ಪಡೆಯುವುದಕ್ಕೂ, ದೊಡ್ಡ ಮಾತುಗಳನ್ನು ಆಡುವುದಕ್ಕೂ ಪ್ರಾರಂಭಿಸಿದರು. ವಿಕಾಸದ ಅಥವಾ ಬಡವರನ್ನು ವಿತ್ತೀಯ ಕ್ಷೇತ್ರದಲ್ಲಿ ಒಳಗೊಳ್ಳುವ ಮಾತಾಡುತ್ತಲೇ ಇವರುಗಳು ಮಾರುಕಟ್ಟೆಯ ಮಾತನ್ನೂ ಲಾಭಾಂಶದ ಮಾತನ್ನೂ ಆಡತೊಡಗಿದ್ದರು. ಈ ಸಂಸ್ಥೆಗಳನ್ನು ನಡೆಸುವವರ ಜೀವನಶೈಲಿಯಲ್ಲಿ ತುಸು ಬದಲಾವಣೆಯೂ ಕಂಡುಬಂತು. ಹಾಗೂ ಎಲ್ಲಕ್ಕಿಂತ ಮಹತ್ವದ್ದೆಂದರೆ ಅವರುಗಳಲ್ಲಿ ಸುಮಾರಷ್ಟು ಜನ ತಮ್ಮ ಈ ವಿತ್ತೀಯ ಸಂಸ್ಥೆಯನ್ನು ಬಂಡವಾಳವನ್ನು ಹೂಡುವ ಅನೇಕ ವಿದೇಶೀ ಪ್ರೈವೇಟ್ ಈಕ್ವಿಟಿ ಸಂಸ್ಥೆಗಳಿಗೆ ಮಾರಿಬಿಟ್ಟರು. ಎಲ್ಲ ಪತ್ರಿಕೆ, ದೂರದರ್ಶನ ವಾಹಿನಿ, ಜಿ-೨೦, ಡ್ಯಾವೋಸ್, ಎಂದು ಮಿಂಚುತ್ತಿದ್ದ, ಬಡವರ ಮಸೀಹ ಎಂದು ಬೀಗುತ್ತಿದ್ದ ವಿಕ್ರಂ ಆಕುಲಾ ತಮ್ಮ ಸಂಸ್ಥೆ ಎಸ್.ಕೆ.ಎಸ್ ನಲ್ಲಿದ್ದ ತಮ್ಮಹೂಡಿಕೆಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿ ಕೈತೊಳೆದುಕೊಂಡುಬಿಟ್ಟರು. ಹಾಗೆಯೇ ಷೇರ್ ಸಂಸ್ಥೆಯ ಉದಯಕುಮಾರ್ ಮತ್ತು ಸ್ಪಂದನಾದ ಪದ್ಮಜಾ ರೆಡ್ಡಿಯವರೂ ತಮ್ಮ ಬಂಡವಾಳದ ಭಾಗವನ್ನು ಮಾರಿಕೊಂಡಿದ್ದಾರೆ. ಹೀಗೆ ಎರಡನೆಯ ಅಲೆಯ ಚಿಕ್ಕಸಾಲಿಗರು ವಿಕಾಸದ ಮಾತುಗಳನ್ನಾಡುತ್ತಾ, ತಮ್ಮ ಬಡತನವನ್ನು ನೀಗಿಸಿಕೊಂಡುಬಿಟ್ಟರು. ಅದು ಸರಿಯೇ ತಪ್ಪೇ ಅನ್ನುವ ಪ್ರಶ್ನೆಯನ್ನು ಉತ್ತರಿಸುವುದು ಜಟಿಲವಾದ ಮಾತು. ಅದು ನೈತಿಕತೆಯನ್ನು ಆಧರಿಸಿದ್ದು. ಹಾಗೆ ನೋಡಿದರೆ ಅವರು ಮಾಡಿದ ಕೆಲಸವನ್ನು ಯಾವುದೇ ವ್ಯಾಪಾರಿ ಮಾಡಿದ್ದರೆ ಅದನ್ನು ಸಹಜವೆನ್ನುವಂತೆ ನಾವು ಸ್ವೀಕರಿಸುತ್ತಿದ್ದೆವು.

ಈಗ ಮೂರನೆಯ ಅಲೆಯ ಚಿಕ್ಕಸಾಲಿಗರು ದೊಡ್ಡ ಬಂಡವಾಳ ಹೂಡಿ ಬಡವರಿಗೆ ಸಾಲ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ಬಡವರು ಒಂದು ವ್ಯಾಪಾರದ ಅಂಗ [market segment] ಮಾತ್ರ. ಇವರಿಗೂ, ಇವರು ಮಾತನಾಡುವ ಭಾಷೆಗೂ ಮಾರುಕಟ್ಟೆಗೂ ಅದ್ಭುತವಾದ ತಾಳಮೇಳವಿದೆ. ತೀವ್ರಗತಿಯಲ್ಲಿ ಈ ವ್ಯಾಪಾರ ಎಲ್ಲೆಡೆಯೂ ಬೆಳೆಯುತ್ತಿದೆ. ಸಧ್ಯಕ್ಕಿರುವ ಲಾಭಗಳನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಆದರೆ, ಚಿಕ್ಕಸಾಲ ಕೊಡುವ ಸಂಸ್ಥೆಗಳು ವರ್ಷಕ್ಕೆ ೧೦೦ ಪ್ರತಿಶತ ಗತಿಯಲ್ಲಿ ಬೆಳೆಯುತ್ತಾ, ಗ್ರಾಮೀಣ ಕ್ಷೇತ್ರದ/ಬಡವರ ಆರ್ಥಿಕತೆ ಮಾತ್ರ - ಅದರಲೂ ಕೃಷಿ ಮಾತ್ರ ೩-೪ ಪ್ರತಿಶತ ಗತಿಯಲ್ಲಿ ಬೆಳೆದರೆ, ಈ ಚಿಕ್ಕ ಸಾಲದ ಸ್ಥಾವರಗಳು ಎಷ್ಟು ಸೂಕ್ಷ್ಮವಾದ ಅಡಿಪಾಯದ ಮೇಲೆ ನಿಂತಿದೆ ಅನ್ನುವುದು ನಮಗೆ ವೇದ್ಯವಾಗುತ್ತದೆ. ಹೀಗಾಗಿ ಎಲ್ಲೋ ಈ ಸ್ಥಾವರ ಅಮೆರಿಕದಲ್ಲಾದ ಸಬ್-ಪ್ರೈಂನ ದಾರಿ ಹಿಡಿಯುವ ಅಪಾಯ ಇದ್ದೇ ಇದೆ. ಹೀಗಾಗಿ ನಾವೊಂದು ಟೈಂಬಾಂಬಿನ ಮೇಲೆ ಕೂತಿದ್ದೇವೆಯೇ ಅನ್ನುವ ಪ್ರಶ್ನೆಯನ್ನು ಸಹಜವಾಗಿ ಎತ್ತಬೇಕಾಗುತ್ತದೆ.

ಸ್ವ-ಸಹಾಯ ಗುಂಪುಗಳಿಗೆ ಈ ದೊಡ್ಡ ಮಟ್ಟದ ಸವಾಲು ಇಲ್ಲ. ಈ ಗುಂಪುಗಳ ಬೆಳವಣಿಗೆಯ ಗತಿ ನಿಧಾನ. ಅವುಗಳು ವಿಫಲಗೊಂಡರೆ ಸ್ಥಳೀಯವಾಗಿ ಮಾತ್ರ ಅದರ ಪರಿಣಾಮವಿರುತ್ತದೆ. ಹಾಗೂ ಈ ಗುಂಪುಗಳ ಬೆಳವಣಿಗೆ ವಿತ್ತೀಯ ಚೌಕಟ್ಟಿನಲ್ಲಿ ಬ್ಯಾಂಕುಗಳೊಂದಿಗೆ ಸೇರಿಹೋಗಿರುವುದರಿಂದ ಆ ಬೆಳವಣಿಗೆಯೂ ಸಹಜಗತಿಯಲ್ಲಿ ನಡೆಯುತ್ತದೆ. ಆದರೆ ಈ ದಾರಿಯಲ್ಲಿ ಪ್ರಗತಿ ನಿಧಾನ ಗತಿಯದ್ದು. ಹೊಸ ಪೀಳಿಗೆಯ ವಿಕಾಸವಾದಿಗಳಿಗೆ ಅಷ್ಟು ತಾಳ್ಮೆಯಿರಲಿಲ್ಲವಾದ್ದರಿಂದ ಈ ರೀತಿಯ ಫಾಸ್ಟ್ ಫುಡ್ ಫೈನಾನ್ಸ್ ನ ಶರಣು ಹೋದರೇನೋ. ರಿಜಲ್ಟ್ ಕಾಣಬೇಕೆಂದರೆ, ಯಶಸ್ಸಿನ ಕೀರ್ತಿ ಒಂದು ವ್ಯಕ್ತಿ ಅಥವಾ ಸಂಸ್ಥೆಗೆ ಉಂಟಾಗಬೇಕಾದರೆ ಈ ದಾರಿ ಹಿಡಿಯುವುದು ಸಹಜವೇ ಆಗಿದೆ. ಆದರೂ ಆಂಧ್ರ ಪ್ರದೇಶದ ವೆಲುಗು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಪ್ರದಾನ್, ಮೈರಾಡಾ, ಧಾನ್ ಸಂಸ್ಥೆಗಳ ಮೂಲಕ ಸಮೂಹ ಕೇಂದ್ರಿತ ವಿತ್ತೀಯ ಸೇವೆಯ ಕೆಲಸ ಮುಂದುವರೆಯುತ್ತಲೇ ಇದೆ. ನಮ್ಮ ಸ್ವಂತ ಮಾದರಿಯನ್ನು ನಾವು ಹೊರಪ್ರಪಂಚಕ್ಕೆ ತೋರುತ್ತಾ ವಿದೇಶದಿಂದ ಬಂದ ಫಾಸ್ಟ್ ಫುಡ್ ಫೈನಾನ್ಸ್ ಅನ್ನು ಅನುಮಾನದಿಂದ ನೋಡುತ್ತಲೇ ಅದರಿಂದ ಕಲಿಯುತ್ತಲೇ ಮುಂದುವರೆಯ ಬೇಕಾಗಿದೆ. ಆದರೂ ನಮಗೆ ವಿದೇಶದ ಮೋಹ ಹೆಚ್ಚೇ. ಈಗ ಬಡವರಿಗೆ ಸಾಲವೂ ವಿದೇಶೀ ಸಂಸ್ಥೆಗಳಿಂದಲೇ ಬರುತ್ತದೆ, ಎಂ.ಟಿ.ಆರ್. ಇಡ್ಲಿಯೂ ವಿದೇಶೀ ಸಂಸ್ಥೆಗಳಿಂದ ಬರುತ್ತದೆ. ವಸುಧೈವ ಕುಟುಂಬಕಂ ಆಗಿರುವ ನಮಗೆ ಇದರಿಂದ ದುಃಖವಾಗಬಾರದಾದರೂ, ನಿಧಾನಗತಿಯ ಆದರೆ ಧೃಡ ಬೆಳವಣಿಗೆಯ ಸಮೂಹವನ್ನೂಳಗೊಳ್ಳುವ ಮಾದರಿಗಳನ್ನು ನಾವು ಮರುಶೋಧಿಸಬೇಕಾಗಿದೆ.  

೨೦ ಏಪ್ರಿಲ್ ೨೦೦೯


ಆತ್ಮಹತ್ಯೆಗಳು: ರೈತರೇ ಏಕೆ?




ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.

ವ್ಯಾಪರಗಳ ವೈಫಲ್ಯತೆಗೆ ಕಾರಣಗಳು ಭಿನ್ನವಾಗಿ ಇರುತ್ತವೆ. ಆದರೆ ಕೃಷಿ ಮತ್ತು ಇತರ ದೊಡ್ಡ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯ ಭಿನ್ನತೆಯನ್ನು ನಾವು ಅರ್ಥಮಾಡಿಕೊಂಡರೆ ಆತ್ಮಹತ್ಯೆಗಳು ಕೃಷಿ ಕ್ಷೇತ್ರದಲ್ಲೇ ಯಾಕೆ ಹಚ್ಚು ಅನ್ನುವುದಕ್ಕೆ ಹೊಳಹುಗಳು ಸಿಗಬಹುದು.

ಸಾಮಾನ್ಯತಃ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯನ್ನು ಗಮನಿಸೋಣ - ಅವುಗಳಲ್ಲಿ ಏಕ ಯಾಜಮಾನ್ಯ, ಸಹಭಾಗಿತ್ವ ಹಾಗೂ ಖಾಸಗೀ ಕಂಪನಿಗಳನ್ನು ನಾವು ಕಾಣುತ್ತೇವೆ. ಜೊತೆಗೆ ಸಹಕಾರ ಸಂಘಗಳೂ ನಮಗೆ ಕಾಣಸಿಗಬಹುದು. ಈ ಸಂಸ್ಥೆಗಳು ನಡೆಸುವ ವ್ಯಾಪಾರಗಳು ವಿಫಲವಾಗುವುದಕ್ಕೆ ಹಲವು ಕಾರಣಗಳಿರಬಹುದಾದರೂ ಅದು ಹೆಚ್ಚಿನಂಶ ವ್ಯಾಪಾರಿಯ ಅಂದಾಜು-ಲೆಕ್ಕ ಏರುಪೇರಾಗುವುದರಿಂದಲೇ ವಿಫಲವಾಗುವುದು ಹೆಚ್ಚು. ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ, ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತೂ ಇದ್ದು ವ್ಯಾಪಾರಿಗಳಿಗೆ ಇತರೆ ಕಾರಣಗಳಿಂದಾಗುವ ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ.

ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆಗೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣೀಭೂತವಾಗಿಬಿಡುತ್ತವೆ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆಗಳನ್ನು ರೂಪಿಸುವುದೂ ಕಷ್ಟ. ವಿಮೆಯ ವ್ಯಾಪಾರ ಸಫಲವಾಗಬೇಕಾದರೆ ಒಟ್ಟಾರೆ ವೈಫಲ್ಯದ ಮಟ್ಟ ಕಡಿಮೆಯಾಗಿದ್ದಾಗಲೇ ಅದಕ್ಕೆ ಸಲ್ಲುವ ಪ್ರೀಮಿಯಂ ಮೊತ್ತವನ್ನು ಕಟ್ಟಿ ಮುಂದುವರೆಯಲು ಸಾಧ್ಯ. ಆದರೆ ಮೂರು-ನಾಲ್ಕುವರ್ಷಗಳಿಗೊಮ್ಮೆ ಕೃಷಿ ಯಾವುದೇಕಾರಣಕ್ಕಾಗಿ ವಿಫಲವಾಯಿತೆಂದು ನಾವು ಅಂದುಕೊಂಡರೂ ಅದಕ್ಕೆ ಸಲ್ಲಬೇಕಾದ ಪ್ರೀಮಿಯಂ ಕನಿಷ್ಟ ಒಟ್ಟಾರೆ ಮೊತ್ತದ ೨೫ ಪ್ರತಿಶತಕ್ಕಿಂತ ಹೆಚ್ಚಾಗಿರಬೇಕೆನ್ನುವುದನ್ನು ಸರಳ ಲೆಕ್ಕಾಚಾರ ತಿಳಿಸುತ್ತದೆ. ಹೀಗಾಗಿ ಮೂಲತಃ ಹೆಚ್ಚಿನ ವೈಫಲ್ಯತೆಯಿಂದ ಕೂಡಿರುವ ಕೃಷಿಗೆ ವಿಮಾಕವಚ ತೊಡಿಸುವದೂ ಆಗದ ಮಾತು.

ಹೀಗೆ, ಮೂಲತಃ ವೈಫಲ್ಯತೆಯ ಅಪಾಯವಿರುವ, ವೈಫಲ್ಯತೆಗೆ ಕಾರಣಗಳು ನೈಸರ್ಗಿಕವಾಗಿರುವ, ವಿಮೆಯ ಸುರಕ್ಷಾಕವಚವಿಲ್ಲದ ವ್ಯಾಪಾರವನ್ನು ನಮ್ಮ ದೇಶದ ಕೃಷಿಕರು ನಡೆಸುತ್ತಾ ಬಂದಿದ್ದಾರೆ! ಮೂಲತಃ ಕೃಷಿಯಲ್ಲಿ ರಿಸ್ಕ್ ಹೆಚ್ಚಿದೆ ಅನ್ನುವುದನ್ನು ಒಪ್ಪುವುದಾದರೆ ಅದು ಆಯೋಜಿತವಾಗಿರುವ ರೀತಿಯಲ್ಲಿ ಆ ರಿಸ್ಕನ್ನು ಮೈಗೂಡಿಸಿಕೊಂಡು ಮುಂದುವರೆಯುವ ತಾಕತ್ತನ್ನು ಈ ವ್ಯಾಪಾರ ನೀಡುವುದಿಲ್ಲ. ಹಾಕಿದ ಬೆಳೆಗೆ ಎಷ್ಟು ಇಳುವರಿ ಬರುತ್ತದೆ ಅನ್ನುವುದು ಒಂದು ಆಯಾಮವಾದರೆ, ಆ ಇಳುವರಿಗೆ ಎಷ್ಟು ಬೆಲೆ ಬರಬಹುದು ಅನ್ನುವುದೂ ಅಪಾಯವಾಗಿಯೇ ಇರುತ್ತದೆ. ಕೃಷಿ ಉತ್ಪನ್ನ ಮಾಡುವುದು ಎಲ್ಲರ ಅಸ್ತಿತ್ವಕ್ಕೂ ಅವಶ್ಯಕವಾದ ಆಹಾರವನ್ನಾದ್ದರಿಂದ ಅದರಲ್ಲಿ ಮಿಕ್ಕ ವ್ಯಾಪಾರಗಳಂತೆ ವಿಪರೀತವಾದಂತಹ ಲಾಭವನ್ನು ಆರ್ಜಿಸುವುದು ಸಾಧ್ಯವೇ ಇಲ್ಲ. ಆಹಾರ ಪದಾರ್ಥಗಳ ಬೆಲೆಯನ್ನು ಹದ್ದುಬಸ್ತಿನಲ್ಲಿಡುವುದೂ ಸರಕಾರದ ಒಂದು ಜವಾಬ್ದಾರಿಯಾದ್ದರಿಂದ ಕೃಷಿಯ ಲಾಭಾಂಶಕ್ಕೆ ಒಂದು ರೀತಿಯ ಮೇಲ್ಮಿತಿಯನ್ನು ಸಹಜವಾಗಿಯೇ ಸರಕಾರ ಹಾಕಿಬಿಡುತ್ತದೆ. ಈ ವ್ಯಾಪಾರದಲ್ಲಿ ಇರುವ ಅಪಾಯಕ್ಕೂ ಬರುವ ಬೆಲೆಗೂ ಇರುವ ಸಂಬಂಧ ತೆಳುವಾದದ್ದಾಗಿದೆ.

ಮೇಲ್ಮಿತಿಯಿರುವ ಈ ವ್ಯಾಪಾರದಲ್ಲಿ ಆಗುವ ನಷ್ಟಕ್ಕೆ ತಳಮಿತಿ ಇಲ್ಲವೇ ಇಲ್ಲ. ಹಾಗೆಂದರೇನು? ಏಕಸ್ವಾಮ್ಯ ಮತ್ತು ಭಾಗಸ್ವಾಮ್ಯ ಸಂಸ್ಥೆಗಳನ್ನು ಬಿಟ್ಟರೆ, ಮಿಕ್ಕ ವ್ಯಪಾರಗಳು ಆಯೋಜಿತವಾಗಿರುವುದು ಕಂಪನಿ ಅಥವಾ ನಿಗಮಗಳಾಗಿ. ಈ ಸಂಸ್ಥೆಗಳ ಹೆಸರಿನ ಅಂತ್ಯದಲ್ಲಿ ಬರುವ "ಲಿಮಿಟೆಡ್" ಅಥವಾ "ನಿಯಮಿತ" ಅನ್ನುವ ಪದದಲ್ಲಿರುವ ಜಾದೂವಿನಿಂದಾಗಿ ನಮ್ಮ ದೇಶದಲ್ಲೇ ಅಲ್ಲ, ಬದಲಿಗೆ ಪ್ರಪಂಚದಾದ್ಯಂತ ’ವಿಫಲ’ ಸಂಸ್ಥೆಗಳಿದ್ದರೂ ಅದನ್ನು ನಡೆಸಿದ ವ್ಯಾಪಾರಿಗಳು ’ಸಫಲ’ರಾಗಿರುವುದನ್ನು ನಾವು ಕಾಣಬಹುದು. ಒಂದು ನಿಯಮಿತ ಕಂಪನಿಯಲ್ಲಿ ಹಣ ಹೂಡಿದರೆ - ಹೂಡಿಕೆದಾರರ ನಷ್ಟ ಅವರು ಒಪ್ಪಿರುವ ಮೊತ್ತಕ್ಕೆ ನಿಯಮಿತವಾಗಿರುತ್ತದೆ. ಹೀಗಾಗಿ ಆ ಸಂಸ್ಥೆ ನಷ್ಟಕ್ಕೆ ಹೋದರೂ, ಸಂಸ್ಥೆಯ ಮಾಲೀಕರು ಆ ಸಂಸ್ಥೆಯಲ್ಲಿ ಹೂಡಿದ ಹಣದ ಮಟ್ಟಿಗೆ ನಷ್ಟವನ್ನು ಅನುಭವಿಸಿ ಬಚಾವಾಗಬಹುದು! ಹೀಗಾಗಿ ಅವರ ವೈಯಕ್ತಿಕ ಸಂಪತ್ತು ಮತ್ತು ಆಸ್ತಿಯನ್ನು ಒಂದು ರೀತಿಯಲ್ಲಿ ಕಾಪಾಡಿಕೊಂಡೇ ವ್ಯಾಪಾರ ಮಾಡಬಹುದು. ಆಧುನಿಕ ಜಗತ್ತಿನ ಈ ಅದ್ಭುತ ಸಂಸ್ಥಾಗತ ಚೌಕಟ್ಟು ಇರುವುದರಿಂದ ’ವಿಫಲ’ತೆಗೆ ತಕ್ಕ ನಷ್ಟ ಇಲ್ಲದೇ ಹೋಗುತ್ತದೆ. ಒಂದು ವೇಳೆ ಹೂಡಿಕೆದಾರ ಹಾಕಿದ ಹಣಕ್ಕಿಂತ ಹೆಚ್ಚಿನ ನಷ್ಟವನ್ನು ಆ ಸಂಸ್ಥೆ ಅನುಭವಿಸಿದರೆ ಅದರ ವಿ’ಫಲ’ವನ್ನು ಪಡೆಯುವವರು ಅಂಥ ಸಂಸ್ಥೆಗೆ ಹಣ ನೀಡಿದ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳು [ಇದಕ್ಕೆ ಇಂಗ್ಲೀಷಿನಲ್ಲಿ ಹೇರ್‌ಕಟ್ ಅನ್ನುವ ಘನತೆಯ ಹೆಸರಿದ್ದರೂ, ನಾವು ಮಾತ್ರ ’ತಲೆ ಬೋಳಿಸುವುದು’ ಎನ್ನುವ ವಾಸ್ತವವನ್ನು ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳುತ್ತೇವೆ].

ಹೀಗಿರುವಾಗ ವಿಫಲ ಸಂಸ್ಥೆಗಳನ್ನು ನಡೆಸಿದ ಹೂಡಿಕೆದಾರರು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕಿ ಮರುಜನ್ಮ ಪಡೆಯಬಹುದು. ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಸ್ಥಾಪಿಸಿ ಮುಳುಗಿಸಿದ ರಮೇಶ್ ಗೆಲ್ಲಿಯವರ ಖಾಸಗೀ ಆಸ್ತಿ, ಅಥವಾ ಸತ್ಯಂ ರಾಮಲಿಂಗ ರಾಜು ಅವರ ವೈಯಕ್ತಿಕ ಆಸ್ತಿಗೆ ಆ ಸಂಸ್ಥೆಗಳ ಗೊಂದಲಗಳಿಂದ ಯಾವ ಧಕ್ಕೆಯೂ ಬಂದಿಲ್ಲ. ಹೀಗೆ ಕೃಷಿಯೇತರ ಕ್ಷೇತ್ರದಲ್ಲಿ ನಮಗೆ ಲಭ್ಯವಿರುವ ಸಂಸ್ಥಾಗತ ಚೌಕಟ್ಟಿನಲ್ಲಿ ಹೂಡಿಕೆದಾರರು ತಮ್ಮ ರಿಸ್ಕನ್ನು ಒಂದು ಹದ್ದುಬಸ್ತಿನಲ್ಲಿಟ್ಟಿರಲು ಸಾಧ್ಯವಿದೆ. ಅದೇ ಆ ಸಂಸ್ಥೆ ಲಾಭವನ್ನು ಆರ್ಜಿಸಿದಲ್ಲಿ ಮೇಲ್ಮಿತಿಯಿಲ್ಲದೇ ಆ ಎಲ್ಲ ಲಾಭವೂ ಹೂಡಿಕೆದಾರರಿಗೇ ಸಂದುತ್ತದೆ. ಇಂದು ನಾವು ನೋಡುತ್ತಿರುವ ಅನೇಕ ಕೋಟ್ಯಾಧಿಪತಿಗಳು ಈ ಮೇಲ್ಮಿತಿಯಿಲ್ಲದಿರುವ ಲಾಭಾಂಶದ ಫಲಧಾರಿಗಳೇ.

ಹತ್ತು ಸಾವಿರ ರೂಪಾಯಿನ ಹೂಡಿಕೆಯಿಂದ ಪ್ರಾರಂಭಿಸಿ ಇನ್ಫಿಯನ್ನು ಈ ಮಟ್ಟಕ್ಕೆ ತಂದಿರುವ ಯಶೋಗಾಥೆ ನಮ್ಮ ಮುಂದಿದೆ. ಆದರೆ ಈ ಜಾದೂ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡಿದ ಯಾರಿಗಾದರೂ [ಸಣ್ಣ, ದೊಡ್ಡ, ಮಧ್ಯಮವರ್ಗದ ರೈತರಿಗೆ] ಆಗಿದೆಯೇ ಅನ್ನುವ ಪ್ರಶ್ನೆ ಬಂದಾಗ ನಮಗೆ ಇಲ್ಲಿರುವ ಸಂಸ್ಥಾಗತ ಚೌಕಟ್ಟಿನ ಪದರಗಳ ಅರಿವು ಹೆಚ್ಚಾಗಿ ಆಗುತ್ತದೆ. ಕೃಷಿ ಅಷ್ಟು ಲಾಭದಾಯಕವಲ್ಲ. ರೈತರು ಹಣ ಮಾಡುತ್ತಿಲ್ಲ. ಆದರೆ ಆ ಕ್ಷೇತ್ರವನ್ನೇ ನಂಬಿ ಮುಂದುವರೆದ ಎಷ್ಟೋ ಸಂಸ್ಥೆಗಳು - ಐಟಿಸಿ, ಬ್ರಿಟಾನಿಯಾ, ಆಹಾರ ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಸೂಪರ್ ಬಜಾರುಗಳು - ಎಲ್ಲರೂ ಲಾಭವನ್ನು ಆರ್ಜಿಸುವ ಸಾಧ್ಯತೆಯನ್ನು - ಮೇಲ್ಮಿತಿಯಿಲ್ಲದ ಲಾಭಾರ್ಜನೆಯ ಕನಸನ್ನು ಕಾಣಬಹುದಾದರೂ ಆ ಕನಸು ಕೃಷಿಕರಿಗೆ ಮಾತ್ರ ಇಲ್ಲವಾಗುತ್ತದೆ.

ಹೀಗಾಗಿ ಕೃಷಿ ಕೈಕೊಟ್ಟಾಗ - ಅನಿಯಮಿತ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ನಡೆವ ರೈತರು ಮನೆ, ಆಸ್ತಿ, ಆಭರಣಗಳನ್ನು ಮಾರಿಕೊಳ್ಳಬೇಕಾಗಿ ಬಂದಾಗ - ಅವರಿಗೆ ಕಾಣುವ ದಾರಿ ಕರಾಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾದರೂ ಸಂಸ್ಥಾಗತ ಮೂಲಗಳು ಕೃಷಿಯಲ್ಲಿ ತೊಡಗಲು ನಮ್ಮ ಸರಕಾರಗಳು ಪರವಾನಗಿ ನೀಡುತ್ತಿಲ್ಲ - ಗುತ್ತಿಗೆ ಕೃಷಿಯೂ ನಮ್ಮ ದೇಶದಲ್ಲಿ ಪ್ರಚಲಿತವಿಲ್ಲ. ಮಿಕ್ಕ ವಿಕಸಿತ ದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ಜನಸಂಖ್ಯೆ ಕಡಿಮೆಯಾದ್ದರಿಂದ ಅವರಿಗೆ ಹೊಂದುವ ಪ್ರಣಾಲಿಗಳನ್ನು ರೂಪಿಸುವುದು ಆ ಸರಕಾರಗಳಿಗೆ ಸಾಧ್ಯವಾಗಿದೆಯಾದರೂ, ನಮ್ಮ ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಯನ್ನು ನಾವು ಗುರುತಿಸಿಯೇ ಇಲ್ಲ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಆತ್ಮಹತ್ಯೆಗೆ ರೈತರೇ ಏಕೆ ಎಂದು ಕೇಳುವ ಪ್ರಶ್ನೆಯನ್ನು ರೈತರಲ್ಲದೆ ಇನ್ಯಾರು ಎಂದು ಕೇಳುವ ದುರಂತಮಯ ಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ.

ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು

"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.


ಮಾ ಬ್ಲಾ ಪೆನ್ನು ತುಂಬಾ ದುಬಾರಿಯಾದದ್ದು. ಆ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಒಂದು ರೀತಿಯಿಂದ ಅಸಮರ್ಪಕವೇ ಅನ್ನಬಹುದು. ಯಾಕೆಂದರೆ ಸರಳತೆಯ ಜೀವನವನ್ನು ಜೀವಿಸಿದ ಮಹಾತ್ಮಾ ಗಾಂಧಿಯ ಹೆಸರಿನ ಜೊತೆಗೆ ಮಾ ಬ್ಲಾ ಪೆನ್ನನ್ನು ಕೊಂಡಿಹಾಕುವ ಯತ್ನ ಅತಿರೇಕದ್ದು ಅನ್ನಿಸದೇ ಇರುವುದಿಲ್ಲ. ಆ ಪೆನ್ನಿನ ಈಚಿನ ಜಾಹೀರಾತು ಇಂತಿದೆ:

ಸ್ವಾತಂತ್ರ. "ಸತ್ಯದ ಮಾರ್ಗ ಅಹಿಂಸೆಯ ಮೂಲಕವೇ ಇದೆ". ಆತನ ನಂಬುಕೆಗಳೇ ಆತನ ಶಕ್ತಿಯಾಗಿತ್ತು, ಸಹಿಷ್ಣುತೆ ಆತನ ನಿಜವಾದ ಜಾತಿಯಾಗಿತ್ತು. ಸಾಧಿಸಿಯೇ ತೀರುತ್ತೇನೆಂಬ ಹುಂಬ ಹಠ ತೋರಿ, ಸಂತ ಜೀವನದ ಉದಾಹರಣೆಯ ಅಸ್ತ್ರವನ್ನು ಹಿಡಿದು ದೇಶಕ್ಕೆ ಸ್ವಾತಂತ್ರವನ್ನೂ ಜಗತ್ತಿಗೆ ಅಹಿಂಸೆ ಎನ್ನುವ ಹೊಸ ಅಸ್ತ್ರವನ್ನೂ ಆತ ನೀಡಿದರು. ಹೀಗೆ ತನ್ನ ಮಾತಿನಿಂದ ಜನಸ್ಥೋಮವನ್ನು ಅವರಾತ್ಮಗಳನ್ನೂ ಕದಲಿಸಬಲ್ಲ ಶಕ್ತಿಯಿದ್ದ ಮನುಷ್ಯನಿಗೆ ಮಾ ಬ್ಲಾ ತನ್ನ ಗೌರವವನ್ನರ್ಪಿಸುತ್ತದೆ.

ನಿಯಮಿತ ಸಂಖ್ಯೆಯಲ್ಲಿ ತಯಾರಿಸಿದ ಮಹಾತ್ಮಾ ಗಾಂಧಿ ಸರಣಿ. ಹತ್ತಿಯ ವಸ್ತ್ರವನ್ನು ಪ್ರತಿನಿಧಿಸುವ ಬಿಳಿಯ ಅರಗಿನ ಪದರ. ಮುಚ್ಚಳದ ಮೇಲೆ ಸ್ಪಿಂಡಲ್ ಮೇಲೆ ಖಾದಿಯ ದಾರ ಸುತ್ತಿದಂತೆ ರೂಪಿಸಿರುವ ೯೨೫ ಸ್ಟರ್ಲಿಂಗ್ ಬೆಳ್ಳಿಯ ಹೊದಿಕೆ, ಕ್ಲಿಪ್ಪಿನ ಮೇಲೆ ಕೇಸರಿ ಬಣ್ಣದ ಮ್ಯಾಂದರಿನ್ ಗಾರ್ನೆಟ್, ಕೈಯಿಂದ ತಯಾರಿಸಿದ ಗಾಂಧಿಯ ಚಹರೆಯಿರುವ ೧೮ ಕ್ಯಾರೆಟ್ ಚಿನ್ನ-ರೋಡಿಯಮ್ ಕವಚದ ನಿಬ್ಬು. ಮಾ ಬ್ಲಾ. ಹೇಳಲೊಂದು ಕಥೆ.

ಈ ಪೆನ್ನಿನ ಬೆಲೆಯೆಷ್ಟಿರಬಹುದು? ಊಹಿಸಲು ಸಾಧ್ಯವಿಲ್ಲ. ದೆಹಲಿ ಏರ್‍ಪೋರ್ಟಿನಲ್ಲಿ ಅದೇ ಕೆಲಸವಾಗಿ ಹೋಗಿ ವಿಚಾರಿಸಿದೆ. ಅದರ ಬೆಲೆ ರೂ. ಒಂದು ಲಕ್ಷ ಅರವತ್ತೇಳು ಸಾವಿರದ ಐನೂರು ರೂಪಾಯಿ. ಇದರಲ್ಲಿ ಮತ್ತೊಂದು ಮಾಡೆಲ್ ಸಹಾ ಉಂಟು ಅದು ಎರಡು ಲಕ್ಷಕ್ಕೂ ಹೆಚ್ಚಿನ ಬೆಲೆಯ ಪೆನ್ನು. ಅದನ್ನು ಮಹಾತ್ಮನ ಮೊಮ್ಮಗ ತುಷಾರ್ ಗಾಂಧಿಯ ಕೈಯಲ್ಲಿಟ್ಟು ಆತನದ್ದೂ ಒಂದು ಚಿತ್ರವನ್ನು ತೆಗೆದು ಆ ಕಂಪನಿಯವರು ಮುದ್ರಿಸಿಬಿಟ್ಟರು.

ಒಂದು ಪೆನ್ನಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ? ಇನ್ನು ಅದರಿಂದ ಬರಬಹುದಾದ ಪದ ಪುಂಜಗಳ ಬೆಲೆ ಎಷ್ಟಿರಬಹುದು? ಆ ಪೆನ್ನಿಗೆ ಅವರದೇ ಆದ ಇಂಕನ್ನೂ ಬಳಸಬೇಕಂತೆ, ಮತ್ತು ಮಾ ಬ್ಲಾ ಪೆನ್ನು ಉಪಯೋಗಿಸುವವರ ಜೀವನಶೈಲಿಯೇ ಭಿನ್ನವಾದದ್ದಗಿರುತ್ತದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಒಟ್ಟಾರೆ ತತ್ತರಿಸಿಹೋಗುತ್ತಿರುವ ಬಡತನವಿರುವ - ಒಂದು ಬಾರಿ ನೆರೆ ಬಂದರೆ ಜೀವನವೇ ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಇದಕ್ಕೆ ಸರಳವಾದ ಉತ್ತರವಿಲ್ಲವಾದರೂ, ಆಗಾಗ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದು ಒಳಿತು. ಈ ಪ್ರಶ್ನೆಗಳು ನೈತಿಕ ಮೌಲ್ಯದ್ದಾದರೂ, ಆ ನೈತಿಕ ಮೌಲ್ಯಗಳು ಎಷ್ಟೋಬಾರಿ ಖಾಸಗಿಯಾದ ಜಾಗಗಳನ್ನು ಆಕ್ರಮಿಸಿದರೂ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ನಮ್ಮ ವಿದೇಶಾಂಗ ವಿಭಾಗದ ರಾಜ್ಯ ಮಂತ್ರಿಗಳಾದ ಶಶ್ ಥರೂರ್ ವಿಷಯವನ್ನೇ ಪರಿಗಣಿಸೋಣ - ಆತ ವಿಶ್ವ ಸಂಸ್ಥೆಯಲ್ಲಿ ಬಹಳ ಕಾಲದವರೆಗೂ ಕೆಲಸ ಮಾಡಿ, ನ್ಯೂ ಯಾರ್ಕಿನಲ್ಲಿ ವಾಸವಾಗಿದ್ದು, ಪ್ರವಾಸ ಹೋದಾಗಲೆಲ್ಲಾ ಪಂಚತಾರಾ ಹೊಟೇಲುಗಳಲ್ಲಿ ಇಳಿದುಕೊಳ್ಳುತ್ತಿದ್ದದ್ದು ಸಹಜವೇ ಆಗಿತ್ತು. ಹಾಗೆಯೇ ಅವರಿಗೆ ವಿಮಾನದ ಮುಂಭಾಗದ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಪ್ರಯಾಣ ಮಾಡುವುದೂ ಸಹಜವಾಗಿತ್ತು. ಆದರೆ ಈಚೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿ ಮಂತ್ರಿಗಳೆಲ್ಲಾ ಎಕಾನಮಿಯಲ್ಲಿ ಪ್ರಯಾಣ ಮಾಡಬೇಕೆಂದು ಹೇಳಿದ್ದರ ಫಲಿತವಾಗಿ ಇದ್ದಕ್ಕಿದ್ದ ಹಾಗೆ ಥರೂರರ ಜೀವನ ಶೈಲಿಯ ಮೇಲೆ ಅನೇಕರ ಗಮನ ಕೇಂದ್ರೀಕೃತವಾಯಿತು. ಆದರೆ ಥರೂರರಿಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲ. ಸರಕಾರದ ನೀತಿಯನ್ನು ಪಾಲಿಸೋಣ, ಆದರೆ ಖರ್ಚಿನ ವಿಷಯಕ್ಕೆ ಬಂದಾಗ ಸರಕಾರೀ ನೀತಿ ತನಗೆ ನೀಡುವುದಕ್ಕಿಂತಾ ಉತ್ತಮವಾದ ಜೀವನಶೈಲಿಯನ್ನು ತಾನು ಸಂಪಾದಿಸಿರುವ ಹಣದಲ್ಲಿ ಪಡೆದುಕೊಂಡರೆ - ಅದು ಬಡವರ, ತೆರಿಗೆ ನೀಡುವ ಜನತೆಯ ಮೇಲೆ ಹೊರೆಯಾಗದಿದ್ದರೆ ಯಾರಾದರೂ ಯಾಕೆ ವಿರೋಧ ವ್ಯಕ್ತ ಪಡಿಸಬೇಕು ಅನ್ನುವ ಸಹಜ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅರ್ಥಾತ್ ತಮ್ಮ ಹಣದಲ್ಲಿ ತಾವು ಐಷಾರಾಮ ಮಾಡಿದರೆ ಸಮಸ್ಯೆ ಏನು? ಅನ್ನುವ ಪ್ರಶ್ನೆಗೆ ನಾವು ಆಷಾಢಭೂತಿಗಳಾಗದೇ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ.

ಇದೇ ಪ್ರಶ್ನೆಯನ್ನು ಯಾರೋ ರಾಹುಲ್ ಗಾಂಧಿಗೆ ಕೇಳಿದಾಗ ಅವರು ನೀಡಿದ ಉತ್ತರ ಕುತೂಹಲದ್ದಾಗಿತ್ತು.. ಸರಳ ಜೀವನ ಎನ್ನುವುದನ್ನು ನೆರೆಯ/ಬರದ ಕಾಲದಲ್ಲಿ ಮಾತ್ರ ಪಾಲಿಸಬೇಕು ಅನ್ನುವುದನ್ನು ತಾವು ನಂಬುವುದಿಲ್ಲವೆಂದೂ, ರಾಜಕೀಯದಲ್ಲಿರುವ ಜನಸಾಮಾನ್ಯರ ನಡುವೆ ಇರುವ ತಮ್ಮಂತಹವರು ಸರಳ ಜೀವನಶೈಲಿಯನ್ನು ಸಹಜವಾಗಿಯೇ ತಮ್ಮದಾಗಿಸಿಕೊಳ್ಳಬೇಕೆಂದು ರಾಹುಲ್ ಹೇಳಿದರು.

ಆದರೆ ನಮ್ಮಲ್ಲೆಲ್ಲ ಈ ದ್ವಂದ್ವ ಯಾವಾಗಲೂ ತಾಂಡವವಾಡುತ್ತಲೇ ಇರುತ್ತದೆ - ನಿರಂತರ ಮೂರು ವರ್ಷಗಳ ಬರವನ್ನು ಕಂಡ ಪ್ರದೇಶಕ್ಕೆ ಯಾವರೀತಿಯ ಧನಸಹಾಯ ಮಾಡಬೇಕು ಎಂದು ಚರ್ಚಿಸಲು ಬರುವ ಅಧಿಕಾರಿಗಳ ಪ್ರಯಾಣ ವಿಮಾನದ ಮುಂಭಾಗದಲ್ಲಿ ನಡೆಯಬೇಕೇ? ಅವರಿಗೂ, ದೇಶದ ವಿದೇಶಾಂಗ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಅಧಿಕಾರಿಗಳಿಗೂ [ಚರ್ಚೆಗೊಳಗಾಗುವ ವಿಷಯವನ್ನು ಹೊರತು ಪಡಿಸಿದರೆ] ಏನು ವ್ಯತ್ಯಾಸ? ಈ ರೀತಿಯಾಗಿ ಸುತ್ತಲೂ ಬಡತನವಿರುವಾಗ ಐಷಾರಾಮಕ್ಕೆ ಹಣ ದುಂದು ಮಾಡಬಾರದು ಎನ್ನುವುದಾದರೆ - ಮುಂಭಾಗ/ಹಿಂಭಾಗವೆನ್ನುವ - ಪಂಚತಾರಾ -ತ್ರಿತಾರಾ ಹೊಟೇಲುಗಳೆನ್ನುವ ವಿಭಾಗಗಳೇಕೆ ಇನ್ನೂ ಇವೆ? ಕೆಲವರಿಗೆ ದೊಡ್ಡ ಕಾರೂ, ಕೆಲವರಿಗೆ ಪುಟ್ಟ ಕಾರೂ, ಕೆಲವರಿಗೆ ಆಫೀಸಿನ ಬಸ್ಸೂ ಯಾಕಿರಬಹುದು?

ಈ ಎಲ್ಲವನ್ನೂ ವಿಚಾರ ಮಾಡಿನೋಡಿದಾಗ ನಮಗೆ ಸರಳ ಸಮಾಧಾನ ಸಿಗದಿದ್ದರೂ ಕೆಲವು ವಿಚಾರಗಳು ಸಾಂಕೇತಿಕ ಮಹತ್ವ ಪಡೆದು ನಿಲ್ಲುತ್ತದೆ ಅನ್ನುವುದು ಮುಖ್ಯವಾದ ವಿಚಾರ. ದೇಶದ ಹಿತವನ್ನು ರಕ್ಷಿಸಬೇಕಾದ ಪ್ರಧಾನ ಮಂತ್ರಿಗಳ ಸಮಯ ಕಿಮ್ಮತ್ತಿನದ್ದು. ಹೀಗಾಗಿ ಅವರಿಗೆ ಪ್ರತ್ಯೇಕ ವಿಮಾನವಿದ್ದರೆ ಅದು ಐಷಾರಾಮಕ್ಕಿಂತ ಅವಶ್ಯಕತೆಗೆ ಸಂಬಂಧಿಸಿದ್ದು. ಹಾಗೆಯೇ ಮಂತ್ರಿಗಳಾಗಿದ್ದವರು ಕಡಿಮೆ ಜನರಿರುವ - ಹೆಚ್ಚು ಅಗಲದ ಸೀಟಿರುವ ಮುಂಭಾಗದಲ್ಲಿ ಕೂತರೆ, ಅಲ್ಲಿ ಕೆಲವು ಕಾಗದ ಪತ್ರಗಳನ್ನು ನೋಡಿ ಸಮಯವನ್ನು ಉಳಿತಾಯ ಮಾಡಬಹುದು. ಎಲ್ಲಕ್ಕೂ ಒಂದು ವಾದವಿರುತ್ತದೆ. ತನ್ನ ಹಣದಲ್ಲಿ ತಾನು ಐಷಾರಾಮ ಮಾಡುತ್ತೇನೆನ್ನುವ ಥರೂರ್ ತಮ್ಮನ್ನು ಕೇಳಿಕೊಳ್ಳಬೇಕಾದ ಒಂದು ಮುಖ್ಯವಾದ ಪ್ರಶ್ನೆ ಹೀಗಿದೆ: ತಾವು ರಾಜಕೀಯಕ್ಕೆ ಬಂದ ಕೂಡಲೇ ಸೂಟು ಬೂಟು ಧರಿಸುವುದನ್ನು ಬಿಟ್ಟು ಕುರ್ತಾ ಬಾಂಧ್‌ಗಲಾ ಧರಿಸುವುದಕ್ಕೆ ಯಾಕೆ ಪ್ರಾರಂಭಿಸಿದರು? ಅರ್ಥಾತ್ ರಾಜಕೀಯದ ಸಾಂಕೇತಿದ ಪೋಷಾಕು ಸೂಟು ಅಲ್ಲ ಎನ್ನುವುದರಿಂದಲೇ? ದೀಪಾವಳಿಯ/ಹಬ್ಬದ ದಿನ ನಾವೆಲ್ಲರೂ ಯಾಕೆ ನಮ್ಮ ಪ್ರತಿದಿನದ ಪೋಷಾಕನ್ನು ಧರಿಸುವುದಿಲ್ಲ?

ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ಮಾ ಬ್ಲಾ ಪೆನ್ನಿಗೂ ಅದರದೇ ಸ್ಥಾನವಿದೆ ಅನ್ನುವುದು ನಮಗೆ ಸಹಜವಾಗಿ ಹೊಳೆಯುತ್ತದೆ. ಆದರೂ ಮಾ ಬ್ಲಾ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಸಾಂಕೇತಿಕವಾಗಿಯಾಗಲೀ, ಸಾಂದರ್ಭಿಕವಾಗಿಯಾಗಲೀ ಸಮಂಜಸವಲ್ಲವಾದ್ದರಿಂದ ಈ ಪ್ರಶ್ನೆ ನಮ್ಮ ಮುಂದೆ ಉದ್ಭವವಾಗುತ್ತದೆ.

ಕಳೆದ ವರ್ಷ ನಾನು ಏರ್ ಇಂಡಿಯಾದ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆ ಸಂಸ್ಥೆಯ ಒಬ್ಬ ಉದ್ಯೋಗಿ ಪಕ್ಕದಲ್ಲಿ ಕೂತು ಮಾತಿಗೆ ತೊಡಗಿದ. ಮಾತು ಮುಂದಕ್ಕೆ ಹೋದಾಗ ಆತ ಇನ್ಫಿಯ ನಾರಾಯಣ ಮೂರ್ತಿ ಮತ್ತು ವಿಪ್ರೋರ ಪ್ರೇಂಜಿ ಬಗ್ಗೆ ಸಿಟ್ಟಾಗಿದ್ದದ್ದು ಕಾಣಿಸಿತು. ಆತನ ವಾದ ಸರಣಿ ಹೀಗಿತ್ತು. "ನೋಡಿ ನಾರಾಯಣ ಮೂರ್ತಿ, ಪ್ರೇಂಜಿ ತಮ್ಮ ಸರಳ ಜೀವನಕ್ಕೆ ಖ್ಯಾತಿ ಪಡೆದಿದ್ದಾರೆ, ಪ್ರತಿಬಾರಿಯೂ ಎಕಾನಮಿಯಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಅವರಿಗೆ ಎಕ್ಸಿಕ್ಯೂಟಿವ್ ಕ್ಲಾಸಿನ ಟಿಕೇಟ್ ಕೊಳ್ಳುವ ತಾಕತ್ತಿರುವಾಗ ಕಡಿಮೆ ಬೆಲೆಯ ಟಿಕೆಟ್ಟನ್ನು ಪಡೆದು ಹಿಂಭಾಗದಲ್ಲಿ ಪ್ರಯಾಣಿಸಬೇಕಾದ ಅವಶ್ಯಕತೆಯೇನು? ಇಂಥವರಿಗಾಗಿಯೇ ಮಾಡಿರುವ ಸೀಟುಗಳನ್ನು ಖಾಲಿ ಬಿಡುವುದರಿಂದ ನಮ್ಮ ಆದಾಯ ಕುಸಿಯುವುದಿಲ್ಲವೇ? ಇದೂ ಸಾಲದ್ದಕ್ಕೆ ನಾವುಗಳು ಅವರನ್ನು ಅಪ್‍ಗ್ರೇಡ್ ಮಾಡಿ ಮುಂದಕ್ಕೆ ಕೂಡಿಸದಿದ್ದರೆ ಜನರೂ - ನೋಡಿ ಈ ಜನರಿಗೆ ನಾರಾಯಣ ಮೂರ್ತಿಯನ್ನು ಗುರುತಿಸುವ ಜ್ಞಾನವೂ ಇಲ್ಲ ಎಂದು ಬೈಯ್ಯುತ್ತಾರೆ." ಹೀಗೆ ನಾರಾಯಣ ಮೂರ್ತಿ, ಪ್ರೇಂಜಿಗಳನ್ನು ತಮ್ಮ ಸರಳತೆಗೆ ಟೀಕಿಸಿದ ವ್ಯಕ್ತಿಯನ್ನು ನಾನು ಮೊದಲಬಾರಿಗೆ ನೋಡಿದ್ದೆ. ಆದರೆ ಆತನ ವಾದದಲ್ಲಿನ ಹುರುಳನ್ನು ನಾನು ಇಂದಿಗೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಈ ಎಲ್ಲವನ್ನೂ ನೋಡಿದಾಗ ಗಾಂಧಿಯ ಮಹತ್ವ ನಮಗೆ ತಿಳಿಯುತ್ತದೆ. ಆತನ ಜೀವನ ಶೈಲಿಯೂ, ಜೀವನ ಸಂದೇಶವೂ ಒಂದೇ ಆಗಿದ್ದರಿಂದ ಈ ರೀತಿಯ ದ್ವಂದ್ವಗಳು ಎಂದೂ ಉದ್ಭವವಾಗುತ್ತಿರಲಿಲ್ಲ. ಅದೇನೇ ಇದ್ದರೂ ಅದು ಇತರರ ಸಮಸ್ಯೆಯಾಗಿತ್ತು. ಹೀಗೆ ಈ ಇಂಥ ವಿಷಯಗಳಲ್ಲಿ ದ್ವಂದ್ವವಿಲ್ಲದಿದ್ದರೆ ಪೆನ್ನು, ವಿಮಾನಯಾನ, ವಾಸ್ತವ್ಯದ ಜಾಗ, ಯಾವುದೂ ಒಂದು ಸಮಸ್ಯೆಯಾಗುವುದಿಲ್ಲ. ಆದರೆ ನಾವೆಲ್ಲರೂ ಗಾಂಧಿಯಂತೆ ಮಹಾತ್ಮರಾಗದೇ ಹುಲು ಮಾನವರಾದ್ದರಿಂದ, ನಮಗೆ ಈ ಸಮಸ್ಯೆಗಳೇ ದೊಡ್ಡದಾಗಿ ದೇಶದ ಸಮಸ್ಯೆಗಳು ಎರಡನೇ ಸ್ಥಾನವನ್ನು ಪಡೆದುಬಡುತ್ತವೆ.

ಅಂದಹಾಗೆ ಗಾಂಧಿ ಮಹಾತ್ಮನಾಗುವ ಪ್ರಕ್ರಿಯೆಯ ಮೊದಲ ಘಟನೆ ನಡೆದದ್ದು ಎಲ್ಲಿ? - ಎಂದು ಒಂದು ಕ್ಷಣದ ಮಟ್ಟಿಗೆ ಯೋಚಿಸಿ! ಅದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಆ ಘಟನೆಯ ಮುಖ್ಯ ತಕರಾರು ಏನಾಗಿತ್ತು? ಗಾಂಧಿಗೆ ರೈಲಿನ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅದಕ್ಕೆ ಪರವಾನಗಿ ಸಿಕ್ಕದೇ ರೈಲಿನಿಂದ ಹೊರಕ್ಕೆ ಹಾಕಲಾಗಿತ್ತು. ಗಾಂಧಿ ಸೂಟು ಧರಿಸಿದ್ದರು!

ಈಗ ಯಾರೋ ನನಗೆ ಕೊಟ್ಟ, ನನ್ನ ಬಳಿಯಿರುವ ಮಾ ಬ್ಲಾ ಪೆನ್ನನ್ನು ಏನು ಮಾಡಬೇಕೆನ್ನುವ ವಿಚಾರವನ್ನು ನಾನು ಪರಿಹರಿಸಲಾರದೇ ಒದ್ದಾಡುತ್ತಿದ್ದೇನೆ.



Friday, April 5, 2013

ಗ್ರಾಮೀಣ್‌ನಿಂದ ಗ್ರಾಮೀಣ್ ಬ್ಯಾಂಕ್‍ನತ್ತ: ಬೆಳವಣಿಗೆಯ ಪಥ.


(ಗ್ರಾಮೀಣ್ ಅನ್ನುವುದು ಸಂಸ್ಥೆಯ ಹೆಸರೂ ಹೌದು, ಮತ್ತು ಆ ಸಂಸ್ಥೆ ಅನುಸರಿಸುವ ವಿತ್ತಪದ್ಧತಿಯೂ ಹೌದು. ಅನೇಕ ಸಂಸ್ಥೆಗಳು ತಮ್ಮನ್ನು ಗ್ರಾಮೀಣ್ ರೆಪ್ಲಿಕೇಟರ್ಸ್ ಎಂದು ವಿವರಿಸಿಕೊಳ್ಳುತ್ತವೆ. ಹೀಗಾಗಿ ಈ ಲೇಖನದಲ್ಲಿ ಗ್ರಾಮೀಣ್ ಪದವನ್ನು ಎರಡೂ ಅರ್ಥಗಳಲ್ಲಿ ಉಪಯೋಗಿಸನಾಗಿದೆ.) 

ಯೂನಸ್‌ಗೆ ನೊಬೆಲ್ ಪ್ರಶಸ್ತಿ ಬಂದಾಗಿನಿಂದಲೂ ಅವರ ಗ್ರಾಮೀಣ್‍ ವಿತ್ತಪದ್ಧತಿಯ ಬಗ್ಗೆ ಜಗದಾದ್ಯಂತ ಆಸಕ್ತಿ ಬೆಳೆದಿರುವುದಲ್ಲದೇ ಅವರ ಸಂಸ್ಥೆಯ ಕಾರ್ಯವೈಖರಿಯು ಗ್ರಾಮೀಣವಿಕಾಸದಲ್ಲಿ ಹಾಗೂ ಬ್ಯಾಂಕಿಂಗ್‌ನಲ್ಲಿ ಒಲವಿರುವ ಎಲ್ಲರ ಕುತೂಹಲವನ್ನೂ ಕೆರಳಿಸಿದೆ. ಇದು ಸಾಲದ್ದಕ್ಕೆ ಆ ಪದ್ಧತಿಯನ್ನು ಅನುಸರಿಸಿ ಧಂಧೆ ನಡೆಸುವ ಬಂಡವಾಳಹೂಡಿಕೆದಾರರ ಗಮನವನ್ನೂ "ಗ್ರಾಮೀಣ್" ತನ್ನೆಡೆಗೆ ಸೆಳೆದುಕೊಂಡಿದೆ. ಗ್ರಾಮೀಣ್ ಬಗ್ಗೆ ಅನೇಕ ವಿದ್ವಾಂಸರು, ಪತ್ರಕರ್ತರು ಬರೆದಿದ್ದಾರಾದರೂ, ಆ ಸಂಸ್ಥೆಯ ಬಗ್ಗೆ ಈಚೆಗೆ ಬಂದಿರುವ ಹೊಸ  ಪುಸ್ತಕ "ದ ಪೂರ್ ಆಲ್ವೇಸ್ ಪೇ ಬ್ಯಾಕ್"  ಆತ್ಮಚರಿತ್ರೆಯ ಮಾದರಿಯದ್ದು. ಅದರ ಲೇಖಕರಾದ ದೀಪಲ್ ಬರೂವ ಗ್ರಾಮೀಣ್ ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಲೇಖಕರಾದ ಆಸಿಫ್ ದೌಲಾ ಗ್ರಾಮೀಣ್ ಸಂಸ್ಥೆಯನ್ನು ಸ್ಥಾಪಿಸುವಾಗಿ ಯೂನಸ್ ಜೊತೆಗಿದ್ದ ಮೂಲ ತಂಡದಲ್ಲಿ ಕೆಲಸ ಮಾಡಿದ್ದರು, ಹಾಗೂ ಯೂನಸ್ ರ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಈ ಪುಸ್ತಕದಿಂದ ನಾವು ಗ್ರಾಮೀಣ್ ಬಗೆಗೆ ವಿಮರ್ಶಾತ್ಮಕವಾಗಿ ಏನಾದರೂ ಬರಬಹುದೆಂದು ಅಪೇಕ್ಷಿಸುವುದು ಸಮಂಜಸವಲ್ಲ. ಆದರೆ ಈ ಪುಸ್ತಕದಿಂದ ಗ್ರಾಮೀಣ್ ಬೆಳೆದುಬಂದ ರೀತಿಯನ್ನೂ ಅದರ ನಡಾವಳಿಯಲ್ಲಿ ಈಚಿನ ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ವಿವರಗಳನ್ನೂ ಅಪೇಕ್ಷಿಸಬಹುದಾಗಿದೆ.

ಈ ಪುಸ್ತಕವನ್ನು ನಾವು ಇದೇ ಹಿನ್ನೆಲೆಯಲ್ಲಿ ಬಂದ ಎರಡು ಇತರ ಪುಸ್ತಕಗಳ ಜೊತೆಗೆ ಪರಿಶೀಲಿಸುವುದು
ಉತ್ತಮ. ಯೂನಸ್‌ಅವರ ಆತ್ಮಕಥನ ಬ್ಯಾಂಕರ್ ಟು ದ ಪೂರ್, (ಬಡವರ ಬ್ಯಾಂಕರ್) ಮತ್ತು ಗ್ರಾಮೀಣ್ ಗ್ರಾಹಕರ ಕಥನಗಳಾದ ಜೋರಿಮೋನ್ ಅಂಡ್ ಅದರ್ಸ್ (ಜೊರಿಮೋನ್ ಮತ್ತು ಇತರರು) ಈ ಎರಡೂ ಪುಸ್ತಕಗಳು ಗ್ರಾಮೀಣ್ ಸಂಸ್ಥೆಯ ಮೊದಲ ದಿನಗಳ ಪ್ರಯೋಗಗಳನ್ನು ವಿವರಿಸುತ್ತವೆ. ಬಡವರ ಬ್ಯಾಂಕರ್ ಗ್ರಾಮೀಣ್ ಸಂಸ್ಥೆಯ ಕಾರ್ಯಚಟುವಟಿಕೆಗಳು, ಅದರ ನಿಯಮಗಳು ಹಾಗೂ ಕಡೆಗೆ ಅದು ವಿಕಸನಗೊಂಡು "ಗ್ರಾಮೀಣ್ ಮಾದರಿ" ಆದ ರೀತಿಯನ್ನು ವಿವರಿಸುತ್ತದೆ. ಜೊರಿಮೋನ್ ಮತ್ತು ಇತರರು ಪುಸ್ತಕದಲ್ಲಿ ಗ್ರಾಮೀಣ್ ಸಂಸ್ಥೆ ಮುಂದೆ ಎದುರಿಸಬಹುದಾದ ಸಮಸ್ಯೆಗಳ ಕುರುಹುಗಳನ್ನು ನಾವು ಕಾಣಬಹುದಾಗಿದೆ. ದುರಾದೃಷ್ಟವಶಾತ್ ಯಾವುದೇ ಕಾರ್ಯ ಯಶಸ್ವಿಯಾಗಿ ನಡೆಯುವಾಗ ಆ ಬಗ್ಗೆ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡು ಬರೆವ ಕಾರ್ಯಕರ್ತರಿಗೆ ತಮ್ಮ ಬರವಣಿಗೆಯ ಸಾಲುಗಳ ಮಧ್ಯದಲ್ಲೇ ಇರುವ ಉಪಕಥೆಗಳು ಕಾಣಿಸುವುದಿಲ್ಲ. ಹೀಗಾಗಿ ಈ ಸುಖದ ಲೋಲುಪತೆಯಿಂದ ಹೊರಬರಲು ಅವರುಗಳಿಗೆ ಹೊರಗಿನಿಂದ ಒಂದು ತೀವ್ರ ಚುರುಕು ತಟ್ಟುವುದು ಅವಶ್ಯವಾಗುತ್ತದೆ. ಈ ಚುರುಕು "೧೯೯೮ರ ದೊಡ್ಡ ನೆರೆಯ ನಂತರ ಬಂತು. ದೇಶದ ಮೂರನೇ ಎರಡು ಭಾಗ ಹನ್ನೊಂದು ವಾರಗಳ ಕಾಲ ನೀರಿನಡಿಯಲ್ಲಿ ಮುಳುಗಿದ್ದಾಗ, ಬ್ಯಾಂಕಿನ ಹಲವು ಕಾರ್ಯಕ್ಷೇತ್ರಗಳಲ್ಲಿ ಸಾಲ ಪಡೆದ ಜನ ಅದನ್ನು ಮರುಪಾವತಿ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದರು. ೮೦ ಪ್ರತಿಶತ ಜನ ತಮ್ಮ ಕಂತುಗಳನ್ನು ಕಟ್ಟುತ್ತಿದ್ದರಾದರೂ, ೨೦ ಪ್ರತಿಶತ ಜನ ತಮ್ಮ ಕಂತುಗಳನ್ನು ಕಟ್ಟುತ್ತಿರಲಿಲ್ಲ" (ಪುಟ xii) ಗ್ರಾಮೀಣ್ ಸಂಸ್ಥೆಗೆ ಈ ಪೆಟ್ಟು ತಟ್ಟಿದಾಗ ಅದು ಪ್ರತಿಕ್ರಿಯಿಸಿತಾದರೂ, ಆ ಪ್ರತಿಕ್ರಿಯೆ ಉಂಟುಮಾಡಬಹುದಾದ ಬದಲಾವಣೆಗಳನ್ನು ಸಂಸ್ಥೆ ಊಹಿಸಿರಲಿಲ್ಲ.

ಮತ್ತೊಂದು ಪೆಟ್ಟು ಬಿದ್ದದ್ದು ನವಂಬರ್ ೨೦೦೧ರ ಕಾಲಕ್ಕೆ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಡೆನಿಯಲ್ ಪರ್ಲ್ ಬರೆದ   ಲೇಖನದಿಂದ. ಇದಂತೂ ಗ್ರಾಮೀಣ್ ಸಂಸ್ಥೆಯನ್ನು ಅಲ್ಲಾಡಿಸಿಬಿಟ್ಟಿತು.  ಗ್ರಾಮೀಣ್‍ಗೆ ಮನ್ನಣೆ ದೊರೆತಿದ್ದ ಪಾಶ್ಚಾತ್ಯಲೋಕದಿಂದ ಈ ಲೇಖನ ಬಂದದ್ದು ಅನ್ನುವುದನ್ನು ನಾವು ಗಮನಿಸಬೇಕು. ಗ್ರಾಮೀಣ್‍ಗೆ ಇದು ದೊಡ್ಡ ಆಘಾತವೇ ಹೌದು. ಏಕೆಂದರೆ, ೧೯೯೭ರಲ್ಲಿ ಗ್ರಾಮೀಣ್ ವಾಷಿಂಗ್‍ಟನ್‍ನಲ್ಲಿ ವಿಶ್ವ ಕಿರುಸಾಲದ ಶೃಂಗಸಭೆ ಆಯೋಜಿಸಿ ಜಗತ್ತಿನ ಭೂಪಟದಲ್ಲಿ ಆಗಲೇ ಒಂದು ದೊಡ್ಡ ಸ್ಥಾನವನ್ನು ಸಂಪಾದಿಸಿಬಿಟ್ಟಿತ್ತು. ಹಿಲರಿ ಕ್ಲಿಂಟನ್, ಸ್ಪೇನಿನ ರಾಣಿ ತಮ್ಮ ಹೆಸರನ್ನು ಈ ಶೃಂಗಸಭೆಯ ಜೊತೆ ಜೋಡಿಸಿದ್ದಲ್ಲದೇ ಅಲ್ಲಿ ಮೂರೂ ದಿನ ಹಾಜರಿದ್ದರು. ಅಲ್ಲಿಂದ ಮುಂದೆ ಈ ಬಗ್ಗೆ ಅವರು ಹಲವು ವೇದಿಕೆಗಳಿಂದ ಮಾತನಾಡಿದ್ದರು. ಹೀಗಾಗಿ ಗ್ರಾಮೀಣ್ ಹೆಸರು ವಿಶ್ವವ್ಯಾಪಿಯಾಗಿಬಿಟ್ಟಿತ್ತು. ಪರ್ಲ್‌‍ ಬರೆದ ಲೇಖನದಲ್ಲಿ ಈಚಿನ ಪುಸ್ತಕದಲ್ಲಿ (ದ ಪೂರ್ ಆಲ್ವೇಸ್ ಪೇ ಬ್ಯಾಕ್) ಒಪ್ಪಿರುವ ಮಾತುಗಳೇ ಇದ್ದುವು. ಗ್ರಾಮೀಣ್ ಸಂಸ್ಥೆಯಲ್ಲಿ ಸಾಲದಬಾಕಿ ಬೆಳೆಯುತ್ತಿದ್ದು ಮರುಪಾವತಿಯ ಶಿಸ್ತು ಕುಂಠಿತಗೊಂಡಿದೆ, ಸಾಲಗಳ ಪಾವತಿಯ ದಿನಾಂಕಗಳನ್ನು ಬದಲಾಯಿಸಿ ಸಮಯವನ್ನು ಲಂಬಿಸುತ್ತಿದ್ದಾರೆ ಹಾಗೂ ಅವಧಿಯೊಳಗೆ ೯೯ಪ್ರತಿಶತ ಸಾಲ ವಸೂಲಿ ಎಂದು ಕೊಚ್ಚಿಕೊಳ್ಳುವ ಗ್ರಾಮೀಣ್ ಸಂಸ್ಥೆಯ ಅಂಕೆಸಂಖ್ಯೆಗಳನ್ನು ಪ್ರಶ್ನಿಸಿ ಪರ್ಲ್ ಲೇಖನ ಬರೆದಿದ್ದರು. ಈ ಲೇಖನವು ಕಿರುಸಾಲದ ಜಗತ್ತಿನಲ್ಲಿ ಒಂದು ಸಂಚಲನವನ್ನೇ ಉಂಟುಮಾಡಿದ್ದಲ್ಲದೇ ಬಹಳ ಚರ್ಚೆಗೆ ಒಳಗಾಯಿತು. ಸಾಲದ್ದಕ್ಕೆ ಯೂನಸ್ ಮತ್ತು ಪರ್ಲ್ ನಡುವೆ ನಡೆದ ಇಡೀ ಪತ್ರವ್ಯವಹಾರವನ್ನು ಗ್ರಾಮೀಣ್ ಸಂಸ್ಥೆಯ ವೆಬ್ ಸೈಟಿನಲ್ಲಿಹಾಕಲಾಯಿತು. ಇಷ್ಟೆಲ್ಲಾ ಸಂಚಲನ ಉಂಟುಮಾಡಿದ ಆ ಘಟನೆ ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾಪಗೊಳ್ಳದೇ ಇರುವುದು ಆಶ್ಚರ್ಯಕರವಾದರೂ, ಗ್ರಾಮೀಣ್ ಸಂಸ್ಥೆಯು ತನ್ನ ಬಗೆಗಿನ ಟೀಕೆಗಳನ್ನು ಮರೆಮಾಚಿ ನಡೆಯುವ ಜಾಯಮಾನವನ್ನು ತೋರಿಸುತ್ತದೆ.

"ಬಡವರ ಬ್ಯಾಂಕರ್" ಪುಸ್ತಕದಲ್ಲಿ ಗ್ರಾಮೀಣ್ ಪದ್ಧತಿಯನ್ನು ಹೇಗೆ ರೂಪಿಸಿ ತೀಡಿ ತಿದ್ದಿ ಒಂದು ಮಟ್ಟಕ್ಕೆ ತರಲಾಯಿತು ಅನ್ನುವುದನ್ನು ಯೂನಸ್ ವಿವರಿಸುತ್ತಾರೆ. ಜೊರ್ಬಾದಲ್ಲಿ ಮೊದಲ ಸಾಲ ಕೊಟ್ಟಾಗಿನಿಂದ ಅದನ್ನು ವಸೂಲಿ ಮಾಡುವ, ಮತ್ತೆ ನೀಡುವ ಪದ್ಧತಿಯನ್ನು ಕಲಿಯಲು ಸಾಕಷ್ಟು ಸಮಯವನ್ನು ಯೂನಸ್ ಮತ್ತು ಅವರ ಮಿತ್ರರು ತೆಗೆದುಕೊಂಡರು. ಆಗ ಅವರು ಅಳವಡಿಸಿದ್ದ ಮೂಲ ರೂಪುರೇಷೆಯಲ್ಲಿ ಹಲವು ಹುಳುಕುಗಳಿದ್ದು, ಸಾಲ ವಸೂಲಾತಿಯ ಸರಿಯಾದ ಮತ್ತು ಅತ್ಯಂತ ಸೂಕ್ತವಾದ ಪದ್ಧತಿಯ ಬಗ್ಗೆಯೇ ಅನುಮಾನಗಳಿದ್ದುವು. ಕಡೆಗೆ ಗ್ರಾಮೀಣ್ ಪದ್ಧತಿಯ ಸಾರವನ್ನು ಗ್ರಹಿಸಿದಾಗ ಅದನ್ನು ಬ್ಯಾಂಕಿಗ್‌ನ ಎರಡು ಸೂತ್ರಗಳಾಧಾರದ ಮೇಲೆ ವಿವರಿಸಬಹುದಿತ್ತು - ಗ್ರಾಹಕನ[ಳ] ಜೊತೆ ನಿರಂತರ ಸಂಪರ್ಕದಲ್ಲಿರುವುದು, ಮತ್ತು ಶಿಸ್ತು. ನಿರಂತರ ಸಂಪರ್ಕದಿಂದಾಗಿ ಗ್ರಾಹಕರ ಸ್ಥಿತಿಗತಿಯನ್ನು ಮತ್ತು ಮರುಪಾವತಿಯ ತೊಂದರೆಗಳನ್ನು ಬೇಗಲೇ ಗ್ರಹಿಸುವ ಸಾಧ್ಯತೆಯಿತ್ತು. ಹೀಗಾಗಿ ಯಾರೂ ಮರುಪಾವತಿಸದಿರುವ ಸ್ಥಿತಿ ಉಂಟಾಗದಂತೆ ಕೆಲವು ಚರ್ಯೆಗಳನ್ನು ಸಂಸ್ಥೆ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಅಷ್ಟೇನೂ ಆರೋಗ್ಯದಾಯಕವಾಗಿರದ ಬಾಂಗ್ಲಾದೇಶದ ಬ್ಯಾಂಕಿಂಗ್  ಆಗ ಇದ್ದ ಪರಿಸ್ಥಿತಿಯಲ್ಲಿ ಗ್ರಾಮಿಣ್ ಪದ್ಧತಿಯ ಅತೀ ಶಿಸ್ತು ಒಂದು ಮದ್ದಿನ ರೂಪದಲ್ಲಿ ಬಂದಿರಬಹುದು. ಆದರೆ ನಿಜವಾದ ಕಾರಣಗಳಿಗೆ ಸಾಲ ಮರುಪಾವತಿ ಮಾಡಲಾರದವರ ಅಸಹಾಯಕತೆಯನ್ನೂ ಸಹಿಸದ ಗ್ರಾಮೀಣ್ ಪದ್ಧತಿ ಅತಿರೇಕಕ್ಕೆ ಹೋಯಿತೇನೋ.

ಈ ಕಾರಣಕ್ಕಾಗಿಯೇ ಗ್ರಾಮೀಣ್ ಸಂಸ್ಥೆಯ ಉದ್ಯೋಗಿಗಳೇ ಗ್ರಾಹಕರ ಜೊತೆ ಮಾತನಾಡಿ ಬರೆದುಕೊಂಡ ಗ್ರಾಹಕರ ಕಥೆಗಳಲ್ಲೇ ನಮಗೆ ಆತಂಕ ಕೇಳಿಬರುತ್ತದೆ. ಪುಟ್ಟ ವ್ಯಾಪಾರಗಳನ್ನು ಪ್ರಾರಂಭಿಸಿ ನಿಜಕ್ಕೂ ಹಣವನ್ನು ಸಂಪಾದಿಸಬಹುದೇ ಅನ್ನುವ ಅನುಮಾನವೂ, ತೆಗೆದ ಸಾಲವನ್ನು ಗ್ರಾಮೀಣ್ ಪದ್ಧತಿಯ ಶಿಸ್ತಿನನುಸಾರವಾಗಿ ಮರುಪಾವತಿಸಲಾರೆವೆನೋ ಎನ್ನುವ ಆತಂಕ ಅವರನ್ನು ಕಾಡುತ್ತಿರುತ್ತದೆ. ಸಾಖೀನಾ ಮತ್ತು ಫುಲ್‍ಜಾನ್‌ರ ಕಥೆಗಳಲ್ಲಿ ಜೊರಿಮೋನಳ ಧ್ವನಿಯಲ್ಲಿ ಈ ಭಯ, ಮತ್ತು ಆ ಕಾರಣಕ್ಕಾಗಿ ಗ್ರಾಮೀಣ್ ಕಾರ್ಯಕ್ರಮವನ್ನು ಸೇರಬೇಕೇ ಬೇಡವೇ ಅನ್ನುವ ಅನುಮಾನ ನಮಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಹೀಗಾಗಿ ಅವರುಗಳು ಗ್ರಾಮೀಣ್ ಸಂಸ್ಥೆಯ ಹಿಡಿತಕ್ಕೆ ಸಿಗಬಾರದೆಂದು ಪ್ರಯತ್ನಿಸುತ್ತಾರೆ. 
ಬಾಂಗ್ಲಾದೇಶದ ಗುಂಪುಗಳಿಗೆ ಹೋಲಿಸಿದರೆ ಭಾರತದ ಸ್ವಸಹಾಯ ಗುಂಪುಗಳು ಭಿನ್ನವಾಗಿ ಕಾಣಿಸುತ್ತವೆ. ಸಮುದಾಯದಲ್ಲಿರುವ ಸಂಬಂಧಗಳ ಆಧಾರದ ಮೇಲೆ, ಕಾಗದ ಪತ್ರಗಳ ಉಪಯೋಗವಿಲ್ಲದೇ ಯಾವುದೇ ಆಸ್ತಿಯನ್ನು ಅಡ ಇಡಬೇಕಾದ ಅವಶ್ಯಕತೆಯಿಲ್ಲದೆ, ನಂಬಿಕೆಯ ಆಧಾರದ ಮೇಲೆ ನಮ್ಮ ಸ್ವಸಹಾಯ ಗುಂಪುಗಳು ನಡೆಯುತ್ತವೆ. ಹೀಗಾಗಿ ಈ ಗುಂಪುಗಳಲ್ಲಿ ಕಾಗದಪತ್ರಗಳನ್ನು ತಯಾರಿಸಬೇಕಾದ, ವಿಸ್ತಾರವಾದ ದಾಖಲಾತಿಯ ಖರ್ಚು ಇರುವುದಿಲ್ಲ. ಸಮುದಾಯದ ನಂಬುಗೆಯನ್ನು ಮುರಿದರೆ ಆಗುವ ಅವಮಾನ ಬ್ಯಾಂಕಿನ ನಂಬುಗೆಯನ್ನು ಮುರಿದಾಗ ಆಗುವ ಅವಮಾನದ ಪರಿಮಾಣಕ್ಕಿಂತ ಹೆಚ್ಚು ಅನ್ನುವ ಸೂತ್ರದ ಮೇಲೆ ಇದು ಆಧಾರಿತವಾಗಿದೆ. 
ಆದರೆ ಗ್ರಾಮೀಣ್ ಪದ್ಧತಿ ಈ ಸಮುದಾಯದ ನಂಬುಗೆಯನ್ನು ಬೆದರಿಕೆಯ ರೀತಿಯಲ್ಲಿ ಉಪಯೋಗಿಸುತ್ತದೆ. [ಈ ಬಗ್ಗೆ ಹೆಚ್ಚಿನ ತಾಂತ್ರಿಕತೆಯನ್ನು ಅರ್ಥಮಾಡಿಕೊಳ್ಳಬಯಸಿದವರು ನನ್ನ ಇಂಗ್ಲೀಷ್ ಲೇಖನವನ್ನು ಇಲ್ಲಿ ಪಡೆಯಬಹುದು]. ಕಾಲಕ್ರಮೇಣ ಗ್ರಾಮೀಣ್ ಪದ್ಧತಿಯೇ ಶಿಸ್ತಿನ ಒಂದು ಪ್ರತೀಕವಾಗಿಬಿಟ್ಟಿದೆ. 
ಗ್ರಾಮೀಣ್ ಗುಂಪುಗಳ ಸಭೆಗಳಲ್ಲಿ ಶಿಸ್ತಿಗೆ ಕೊಡುವ ಪ್ರಾಮುಖ್ಯತೆ ಸಾಲ ಮರುಪಾವತಿಗೇ ಸೀಮಿತವಾಗಿಲ್ಲ. ಸಮಯ ಪಾಲನೆ, ಆಂತರಿಕ ನಡಾವಳಿಯಲ್ಲಿಯೂ ಶಿಸ್ತು ಕಂಡುಬರುತ್ತದೆ. ಇದೂ ಸಾಲದೆಂಬಂತೆ ಈ ಎಲ್ಲ ಶಿಸ್ತನ್ನೂ ಪಾಲಿಸುತ್ತೇವೆಂಬ ಪ್ರಮಾಣವನ್ನೂ ಗ್ರಾಹಕರು ಮಾಡಬೇಕು. ಶಿಸ್ತನ್ನು ಮುರಿದಾಗ ಸಮಾಜದಲ್ಲಿ ಅಪಮಾನವೂ ಆಗಬಹುದು. ಈ ಎಲ್ಲವೂ ನಂಬಿಕೆಯಾಧಾರದ ಮೇಲೆ ಕಟ್ಟಿದ ಶಿಸ್ತಾಗಿರದೇ ಭೀತಿಯ ಆಧಾರದ ಮೇಲೆ ಕಟ್ಟಿದ ಶಿಸ್ತಾಗಿದೆ. ಇದೂ ಅಲ್ಲದೇ ಗ್ರಾಮೀಣ್ ಸಾಲದ ಒಂದು ನಿರಂತರ ಯಂತ್ರವಾಗಿದ್ದು, ಅದರಿಂದ ಹೊರಬರುವುದೇ ಕಷ್ಟ ಅನ್ನುವ ಸ್ಥಿತಿಗೆ ಬಂದುಬಿಟ್ಟಿತ್ತು. ಅದಕ್ಕೆ ಕಾರಣವೆಂದರೆ ಗ್ರಾಹಕರು ಸಾಲ ಪಡೆಯದಿದ್ದಲ್ಲಿ ಗುಂಪಿನ ಸದಸ್ಯತ್ವವನ್ನು ಪಡೆಯುವುದೇ ಸಾಧ್ಯವಿದ್ದಿಲ್ಲ.

ಯಾವ ವ್ಯಾಪಾರಕ್ಕಾಗಿ ಸಾಲವನ್ನು ಗ್ರಾಹಕರು ಪಡೆದುಕೊಂಡಿರುತ್ತಾರೋ ಆ ಚಟುವಟಿಕೆ ಎಲ್ಲಿಯವರೆಗೆ ಲಾಭದಾಯಕವಾಗಿ ನಡೆಯುತ್ತದೋ ಅಲ್ಲಿಯವರೆಗೆ ಈ ಪದ್ಧತಿ ಕೆಲಸ ಮಾಡುತ್ತದೆ. ಒಂದೆರಡು ಸಣ್ಣ ಪುಟ್ಟ ವಿಫಲತೆಗಳನ್ನು ಗುಂಪಿನ ಇತರೆ ಸದಸ್ಯರು ಒಪ್ಪಿ ತಮ್ಮ ಸಹ ಸಾಲಿಗರ ಜೊತೆಗೆ ಹೆಗಲು ಸೇರಿಸಿ ನಿಲ್ಲುತ್ತಾರೆ.  ಸಾಲ ಕಟ್ಟದವರನ್ನು ಕ್ರಮೇಣ ಗುಂಪಿನಿಂದ ಹೊರಹಾಕಿಯೂ ಮುಂದುವರೆಯುವ ಸಾಧ್ಯತೆಯನ್ನೂ ತೋರಿದ್ದಾರೆ. ಈ ಯಂತ್ರವನ್ನು ನಡೆಸಲು ಗುಂಪಿನ ಒಂದು ದೊಡ್ಡ ಪರಿಮಾಣ ಸದಾ ಯಶಸ್ವಿಯಾದ ವ್ಯಾಪಾರವನ್ನು ನಡೆಸುತ್ತಿರಬೇಕು. ಆದರೆ ೧೯೯೮ರ ನೆರೆ ಈ ಆಟದ ಹಲವು ನಿಯಮಗಳನ್ನು ಪ್ರಶ್ನಿಸಿಬಿಟ್ಟಿತ್ತು. ಅನೇಕ ಗುಂಪುಗಳ ಅನೇಕ ಜನರಿಗೆ ಒಂದೇ ಬಾರಿ, ಏಕಕಾಲಕ್ಕೆ ನಷ್ಟವಾಯಿತು. ಇಂಥಹ ಏಕಕಾಲ ನಷ್ಟದಿಂದ ಸಾಲದ ಯಂತ್ರಕ್ಕೆ ಧಕ್ಕೆ ಉಂಟಾದದ್ದು ಸಹಜ.

ದ್ವಿತೀಯ ಗ್ರಾಮೀಣ್ ಮೂಲಭೂತ ಪದ್ಧತಿಯಲ್ಲಿದ್ದ ಅನೇಕ ಅಂಶಗಳನ್ನು ಪರಿಗಣಿಸಿ ಪದ್ಧತಿಯನ್ನು ಬದಲಾಯಿಸುವ ಕಾರ್ಯಕ್ರಮವಾಯಿತು. ಈ ಕೆಲಸವನ್ನು ಗ್ರಾಮೀಣ್ ಸಂಸ್ಥೆ ಮೊದಲೇ ಮಾಡಬಹುದಿತ್ತು. ವಿಶ್ವದಾದ್ಯಂತ ಅನೇಕರು ಈ ಪದ್ಧತಿಯಲ್ಲಿನ ತೊಂದರೆಗಳ ಬಗ್ಗೆ ಅದರಿಂದ ಆಗುವ ನಷ್ಟದ ಬಗ್ಗೆ ಬರೆದಿದ್ದರೂ, ಗ್ರಾಮೀಣ್ ಸಂಸ್ಥೆ ಅದನ್ನು ಆತ್ಮಾವಲೋಕನಕ್ಕಾಗಿ ಪರಿಗಣಿಸಲೇ ಇಲ್ಲ. ಆದರೆ ಒಂದು ಪೆಟ್ಟು ಬಿದ್ದಾಗ ಮಾತ್ರ ಈ ವಿಚಾರದ ಬಗ್ಗೆ ಗ್ರಾಮೀಣ್ ಸಂಸ್ಥೆ ಪ್ರತಿಕ್ರಿಯಿಸಿತು. ಆದರೆ ಗ್ರಾಮೀಣ್ ಸಂಸ್ಥೆ ಪ್ರತಿಕ್ರಿಯಿಸಿದಾಗ ಅದು ಅತ್ಯಂತ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಿತು. ೧೯೯೮ ರ ನೆರೆಯ ನಂತರ ಗ್ರಾಮೀಣ್ ತನ್ನ ಪದ್ಧತಿಯನ್ನು ಗ್ರಾಮೀಣ್-೨ ಗೆ ಬದಲಾಯಿಸಿತು. ಆ ಬದಲಾವಣೆ ಗ್ರಾಮೀಣ್ ಪದ್ಧತಿಯ ಮೂಲಭೂತ ಸೂತ್ರಗಳನ್ನು ಬುಡಮೇಲು ಮಾಡಿತ್ತು. ಈ ಬದಲಾವಣೆಯು ಗ್ರಾಮೀಣ್ ಸಂಸ್ಥೆಯನ್ನು ಮುಖ್ಯಪ್ರವಾಹದ ಬ್ಯಾಂಕಿಂಗ್ ಪದ್ಧತಿಯತ್ತ ಕರೆದೊಯ್ದಿತು. 

ತಮ್ಮ ಗ್ರಾಹಕರು ಕಾಲಾಂತರದಲ್ಲಿ ಬೆಳೆದಿದ್ದಾರೆ, ಅವರ ಅವಶ್ಯಕತೆಗಳು ಬೆಳೆದಿವೆ, ಅವರುಗಳು ಹೆಚ್ಚು ಸಾಲವನ್ನು ಪಡೆಯಬಲ್ಲವರಾಗಿದ್ದಾರೆ, ಈ ಎಲ್ಲವೂ ಪದ್ಧತಿಯಲ್ಲಿನ ಮಾರ್ಪಾಡನ್ನು ಬಯಸುತ್ತವೆ ಎಂದು ಗ್ರಾಮೀಣ್ ಸಂಸ್ಥೆ ಹೇಳಿದರೂ ಇಲ್ಲಿ ಗ್ರಾಹಕರ ಬೆಳವಣಿಗೆಗಿಂತ ಗಹನವಾದ ಮಾತಿದೆ. ಹಳೇ ಗ್ರಾಮೀಣ್ ಪದ್ಧತಿಯಲ್ಲಿ ಕೆಲ ಗ್ರಾಹಕರು ಸಾಲಮರುಪಾತಿ ಮಾಡದಿರುವುದರಿಂದ ಆಗಬಹುದಾದ ನಷ್ಟವನ್ನು ಗುಂಪಿನ ಮೂಲಕ - ಆ ಗುಂಪು ಕಟ್ಟುತ್ತಿದ್ದ ಕಡ್ಡಾಯ ತರಿಗೆ ಹಾಗೂ ಕಡ್ಡಾಯ ಉಳಿತಾಯದ ಮೂಲಕ - ತುಂಬಲಾಗುತ್ತಿತ್ತು. ಸಣ್ಣಪುಟ್ಟ ನಷ್ಟಗಳನ್ನು ಒಂದೆರಡು ಕಂತುಗಳನ್ನು ಕಟ್ಟಲಾಗದ ಪರಿಸ್ಥಿತಿಯನ್ನು ಮೀರಿ ಮುಂದುವರೆಯಲು ಈ ತೆರಿಗೆ-ಉಳಿತಾಯ ಸಾಕಾಗುತ್ತಿತ್ತು. ಜೊತೆಗೆ ಇದರಿಂದಾಗಿ ಗ್ರಾಮೀಣ್ ಸಂಸ್ಥೆಯ ಲೆಕ್ಕ ಪುಸ್ತಕಗಳಲ್ಲೂ ಯಾವ ಬಾಕಿಯನ್ನೂ ತೋರಿಸದೇ ಮುಂದುವರೆಯಲು ಸಾಧ್ಯವಾಗುತ್ತಿತ್ತು. ನಿಜವಾದ ಬಾಕಿ ಮೊತ್ತ ಇನ್ನೂ ಹೆಚ್ಚಾಗಿದ್ದರೂ ಈ ಏರ್ಪಾಟಿನಿಂದ ಎಲ್ಲವೂ ಸಾಫಾಗಿ-ಶುದ್ಧವಾಗಿ ಕಾಣುತ್ತಿತ್ತು. ಗ್ರಾಮೀಣ್ ಪದ್ಧತಿಯಲ್ಲಿ ಕೊಟ್ಟ ಸಾಲಗಳೆಲ್ಲವೂ ಒಂದೇ ರೀತಿಯದ್ದಾಗಿದ್ದವು. ಯಾವ ಕಾರಣಕ್ಕಾಗಿ ಸಾಲ ನೀಡಿದ್ದಾರೆ ಅನ್ನುವುದು ಮುಖ್ಯವಾಗದೇ ಎಲ್ಲಕ್ಕೂ ಪೂರ್ವನಿಗದಿತ ಸಮಾನ ಬಡ್ಡಿದರ ಇರುತ್ತಿತ್ತು, ವಾರಕ್ಕೊಮ್ಮೆ ಕಂತನ್ನು ಕಟ್ಟಬೇಕಿತ್ತು. ಹೀಗಾಗಿ ಹಣವನ್ನು ಯಾವುದೇ ಕೆಲಸಕ್ಕೆ ಉಪಯೋಗಿಸಬಹುದು ಅನ್ನುವ ವಾದವನ್ನು ಒಂದು ರೀತಿಯಲ್ಲಿ ಗ್ರಾಮೀಣ್ ಸಂಸ್ಥೆ ಅತಿರೇಕಕ್ಕೆ ಒಯ್ದಿತ್ತು ಅನ್ನಿಸುತ್ತದೆ. ಹೀಗಾಗಿ ಗ್ರಾಮೀಣ್ ಸಂಸ್ಥೆಯ ಅಂತರಿಕ ನಿಯಂತ್ರಣ, ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುವ ರೀತಿ, ಎಲ್ಲವೂ ಸರಳವಾಗಿ ನೇರವಾಗಿತ್ತು. ಹೀಗಾಗಿಯೇ ಈ ಪದ್ಧತಿಯನ್ನು ಅನೇಕ ಜಾಗಗಳಲ್ಲಿ ಒಂದು ಮಾದರಿಯಾಗಿ ಉಪಯೋಗಿಸಲೂ ಸಾಧ್ಯವಾಯಿತು. 

ಮಾರ್ಕ್ ಟ್ವೇನ್ ಹೇಳಿದ್ದನಂತೆ: "ನಾನು ಹದಿನಾಲ್ಕು ವರ್ಷದವನಾಗಿದ್ದಾಗ ನನ್ನ ತಂದೆ ಎಷ್ಟು ಮೂರ್ಖರಾಗಿದ್ದರೆಂದರೆ, ಅವರು ನನ್ನ ಆಜುಬಾಜುವಿನಲ್ಲಿದ್ದರೂ ನನಗೆ ಕಿರಿಕಿರಿಯಾಗುತ್ತಿತ್ತು. ಆದರೆ ನನಗೆ ಇಪ್ಪತ್ತೊಂದಾಗುವ ವೇಳೆಗೆ, ಈ ಮನುಷ್ಯ ಕಳೆದ ಏಳು ವರ್ಷಗಳಲ್ಲಿ ಎಷ್ಟೊಂದು ಕಲಿತು ಪ್ರಬುದ್ಧನಾಗಿದ್ದಾನೆ ಅಂತ ನನಗೆ ಆಶ್ಚರ್ಯವಾಗುತ್ತಿದೆ" ಅಂದಿದ್ದನಂತೆ. ಗ್ರಾಮೀಣ್ ಕಥೆಯೂ ಅಂಥದ್ದೇ ಆಗಿದೆ. ಈ ಬೆಳವಣಿಗೆಯನ್ನು ಆ ಸಂಸ್ಥೆಯ (ಜೊರಿಮೋನ್‌ಳಂತಹ) ಅನೇಕ ಗ್ರಾಹಕರ ಬೆಳವಣಿಗೆಯೆಂದು ಹೇಳಲಾಗತ್ತದಾದರೂ ಅದು ನಿಜಕ್ಕೂ ಗ್ರಾಮೀಣ್ ಸಂಸ್ಥೆಯ ಬೆಳವಣಿಗೆಯ ಕಥೆಯೋ ಆಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ್ ಸಂಸ್ಥೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳುವುದು ಸಮಂಜಸವೆನ್ನಿಸಬಹುದು. 

  • ಕಡು ಬಡವರೊಂದಿಗೆ ಮಾತ್ರ ವ್ಯವಹಾರ ನಡೆಸುವ ಈ ಸಂಸ್ಥೆ, ಬಡವರು ಎಂದು ಹಣೆಪಟ್ಟಿ ಹಚ್ಚಲಾಗದ (ಅಂದರೆ ಬಡತನದಿಂದ ಆಚೆ ಬಂದ) ಗ್ರಾಹಕರೊಂದಿಗೆ ಏನು ಮಾಡುತ್ತದೆ? ಅವರುಗಳನ್ನು ಸಂಸ್ಥೆಯಿಂದ ತೇರ್ಗಡೆಗೊಳಿಸಿ ಬೇರೆ ದೊಡ್ಡ ಬ್ಯಾಂಕುಗಳ ಸುಪರ್ದಿಗೆ ಒಪ್ಪಿಸುತ್ತದೆಯೇ ಅಥವಾ, ಆ ಗ್ರಾಹಕರಿಗೆ ಬೇಕಾದ  ಸೇವೆಗಳನ್ನುಗ್ರಾಮೀಣ್ ಒದಗಿಸಿಕೊಡುತ್ತದೆಯೇ? ಪುಸ್ತಕದಲ್ಲಿ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ ೫೮.೪ ಪ್ರತಿಶತ ಗ್ರಾಮೀಣ್ ಗ್ರಾಹಕರು, ಅವರೇ ನಿರ್ಮಿಸುವ ಹತ್ತು ಅಂಶಗಳ ಮಾಪನದ ಪ್ರಕಾರ ಬಡತನದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಗ್ರಾಮೀಣ್ ಸಂಸ್ಥೆಯ ಬಹುಸಂಖ್ಯಾತ ಗ್ರಾಹಕರು ಅವರದೇ ಮಾಪನದ ಪ್ರಕಾರ ಬಡವರಲ್ಲ.
  • ವಾರಕ್ಕೊಮ್ಮೆ ಸೇರುವುದು, ಪ್ರಮಾಣ ವಚನವನ್ನು ಪಠಿಸುವುದು, ಮುಂತಾದ ಪದ್ಧತಿಗಳು ಬಹಳ ಸಮಯವನ್ನು ಬೇಡುತ್ತವೆ. ಗ್ರಾಹಕರಿಗೆ ಈಗಿರುವ ವ್ಯಾಪಾರದ ಚೌಕಟ್ಟಿನಲ್ಲಿ ಈ ಶಿಸ್ತನ್ನು ಪಾಲಿಸುವುದು ಕಠಿಣವಾದ ಮಾತು ಅನ್ನುವ ತೀರ್ಮಾನಕ್ಕೆ ಗ್ರಾಹಕರುಬಂದಾಗ ಏನಾಗುತ್ತದೆ?
  • ಹಿಗ್ಗುತ್ತಿರುವ ಗ್ರಾಹಕ ಬಳಗ, ಹಿಗ್ಗುವ ಅವರ  ವಶ್ಯಕತೆಗಳು ಇವುಗಳಿಗಾಗಿ ಹಿಂದೆ ಹಣನೀಡುತ್ತಿದ್ದ ವಿದೇಶೀ ಅನುದಾನ ಸಂಸ್ಥೆಗಳು ತಮ್ಮ ಹಣವನ್ನು ಬಿಗಿ ಮಾಡಿದಾಗ ಅಥವಾ ಅವರುಗಳ ಸಂಪನ್ಮೂಲಗಳು ಗ್ರಾಮೀಣ್ ಸಂಸ್ಥೆಯ ಪ್ರಗತಿಯ ಗತಿಯಲ್ಲೇ ಹೆಜ್ಜೆ ಹಾಕಲು ಸಾಧ್ಯವಾಗದಾಗ ಗ್ರಾಮೀಣ್ ಏನು ಮಾಡುತ್ತದೆ?
ಈ ವಿಚಾರಗಳನ್ನು ಗ್ರಾಮೀಣ್ ತುರ್ತಾಗಿ ಅವಲೋಕನ ಮಾಡಬೇಕಿತ್ತು. ಜೊತೆಗೆ ಗ್ರಾಮೀಣ್ ಬಾಂಗ್ಲಾದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಂದು ಪ್ರಮುಖ ಸಂಸ್ಥೆಯಾಗಿದ್ದದ್ದರಿಂದ ಆ ವ್ಯವಸ್ಥೆಯ ಒಟ್ಟಾರೆ ನಿಯಮಾವಳಿ ಮತ್ತು ನಡಾವಳಿಗೆ ಒಗ್ಗಿಕೊಳ್ಳಬೇಕಾದ ಅವಶ್ಯಕತೆಯೂ ಇತ್ತು. ಅದಕ್ಕೆ ಒಗ್ಗದಿದ್ದರೆ, ತನ್ನ ಗ್ರಾಹಕ ಸಮುದಾಯವನ್ನು ಪ್ರಾರಂಭಿಕ - ಆಗಷ್ಟೇ ವಿತ್ತಸೇವೆಗಳನ್ನು ಪಡೆವ ಜನರೆಂದು - ಪರಿಗಣಿಸಿ, ಅವರೊಂದಿಗೇ ಕೆಲಸ ಮಾಡುತ್ತಾ, ಅವರುಗಳು ಬೆಳೆದಂತೆ ಅವರನ್ನು ಮುಖ್ಯಧಾರೆಯ ಇತರ ಸಂಸ್ಥೆಗಳಿಗೆ ಒಪ್ಪಿಸುತ್ತಾ ಮುಂದುವರೆಯಬೇಕಿತ್ತು. ಈ ಅಂಶವನ್ನು ನೀಲಂ ಮಹೇಶ್ವರೀ ಅಜಮೇರ್‌‍ನಲ್ಲಿ ನಡೆಸಿದ ತಮ್ಮ ಅಧ್ಯಯನದಲ್ಲಿ ಗ್ರಹಿಸಿದ್ದಾರೆ. ಸ್ವಸಾಹಯ ಗುಂಪಿನ ಕೆಲ ಮಹಿಳೆಯರು ಇತರರಿಗಿಂತ ತ್ವರಿತಗತಿಯಲ್ಲಿ ಮುಂದುವರೆದಾಗ, ಅವರ ಅವಶ್ಯಕತೆಗಳನ್ನು ಗುಂಪಿನಿಂದ ಪೂರೈಸುವುದು ಸಾಧ್ಯವಾಗುವುದಿಲ್ಲ, ಹೀಗಾಗಿ ಅನೇಕ ಗುಂಪುಗಳಿಂದ ಬಂದ 'ತ್ವರಿತ ಪ್ರಗತಿ ಸಾಧಿಸಿದ' ಮಹಿಳೆಯರು 'ಕಂಪನಿ' ಎಂದು ಕರೆವ ತಮ್ಮದೇ ಗುಂಪುಗಳನ್ನು ಆಯೋಜಿಸಿಕೊಂಡು, ಗುಂಪನಂಥದೆ ನಿಯಮಗಳ ಆಧಾರದ ಮೇಲೆ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಆದರೆ ಇಲ್ಲಿ ಈ ಕಂಪನಿ ಗುಂಪುಗಳು ಒಂದು ನಿಯಮಿತ ಕಾಲದ ನಂತರ ತಾನಾಗಿಯೇ ಮುಚ್ಚಿಹೋಗುತ್ತದೆ. ಸ್ವಸಹಾಯ ಗುಂಪಿನ ನಿಯಮದ ಆಧಾರದ ಮೇಲೆಯೇ ನಡೆವ ಈ ಕಂಪನಿಗಳು ಮಹಿಳೆಯರೇ ತಮ್ಮ ಅವಶ್ಯಕತೆಗನುಸಾರ ಕಂಡುಕೊಂಡಿರುವ ವಿಧಾನವಾಗಿದೆ. 

ಗ್ರಾಮೀಣ್ ಸಂಸ್ಥೆಯು ಮಾರುಕಟ್ಟೆಯ ನಿಯಮಕ್ಕೆ ಒಗ್ಗಿಕೊಂಡು ಮುಂದುವರೆದರೆ, ಕಡುಬಡವರ ಜೊತೆ ಕೆಲಸ ಮಾಡುತ್ತಿದ್ದ ತನ್ನ ಮೂಲ ಉದ್ದೇಶವನ್ನು ಮರೆತುಬಿಡುವ ಸಾಧ್ಯತೆ ಇದೆ - ಕಾಲಾಂತರದಲ್ಲಿ ಬೇರೆ ದಾರಿಯನ್ನು ಅಪ್ರಯತ್ನವಾಗಿ ಕ್ರಮಿಸುವ ಸಾಧ್ಯತೆ ಇದೆ ಎನ್ನುವ ಎಚ್ಚರವನ್ನು ವಹಿಸಬೇಕಾಗುತ್ತದೆ. ಗ್ರಾಮೀಣ್-೨ ಎಂಬ ಹಂತವು ಆ ಸಂಸ್ಥೆ ಮಾರುಕಟ್ಟೆಯ ನಿಯಮಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮರುರೂಪಿಸುವ ಒಂದು ಸಾಹಸವೇ ಎನ್ನಬೇಕಾಗಿದೆ. ಮುಖ್ಯಧಾರೆಯ ಬ್ಯಾಂಕಿನ ಪದ್ಧತಿಗಳನ್ನು ಅನುಸರಿಸುತ್ತಲೇ ಕಡುಬಡವರಿಗೆ ಸಾಲ ಮತ್ತು ಇತರ ವಿತ್ತೀಯ ಸೇವೆಗಳನ್ನು ಒದಗಿಸುವ ಪ್ರಯತ್ನವು ಗ್ರಾಮೀಣ್-2 ಮೂಲಕ ನಡೆಯುತ್ತಿದೆ. ಸಂಸ್ಥೆಯ ಮೂಲ ಆಧಾರ ಸೂತ್ರಗಳಾದ - ಬಡಗ್ರಾಹಕರೇ ಬ್ಯಾಂಕಿನ ಮಾಲೀಕತ್ವ ಪಡೆದಿರುವುದು, ಮತ್ತು ಅದರ ಕಾರ್ಯಪ್ರಣಾಲಿಯನ್ನು ರೂಪಿಸುವಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸುವುದು ಇವನ್ನು ಗ್ರಾಮೀಣ್-2 ಬಿಟ್ಟುಕೊಟ್ಟಿಲ್ಲ. ಬದಲಾಗಿರುವುದು ಸಾಲ ನೀಡುವ, ಮರುಪಾವತಿಸುವ, ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವ ರೀತಿರಿವಾಜುಗಳಷ್ಟೇ.

ಗ್ರಾಮೀಣ್-೨ರಲ್ಲಿ ಇರುವ ನಿಯಂತ್ರಣಾ ಸೂತ್ರಗಳು ಮೊದಲಿಗಿಂತ ಭಿನ್ನವಾಗಿವೆ. ಗುಂಪುಗಳು ನಿಯಮಿತವಾಗಿ ವಾರಕ್ಕೊಮ್ಮೆ ಭೇಟಿಯಾಗುತ್ತವಾದರೂ, ಒಬ್ಬರು ಮರುಪಾವತಿಸದ ಕಂತಿಗೆ ಗುಂಪಿನ ಇತರರನ್ನು ಜವಾಬ್ದಾರರನ್ನಾಗಿ ಮಾಡುವ ಪದ್ಧತಿಯನ್ನು ಕೈಬಿಡಲಾಗಿದೆ. ಇದರ ವಿರುದ್ಧ ಸಾಲ ಪಡೆದವರದ್ದೇ ಉಳಿತಾಯದ ಮೊತ್ತ ಮತ್ತು ವಿಮೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಹಿಂದಿನ ಪದ್ಧತಿಯಲ್ಲಿ ಗುಂಪು ತೆರಿಗೆಯ ಮೂಲಕ ಇಡೀ ಗುಂಪಿನ ಸಾಲದ ಜವಾಬ್ದಾರಿಯನ್ನು ಹೊರುತ್ತಿದ್ದ ಗ್ರಾಹಕರು ಈಗ ತಮ್ಮ ಉಳಿತಾಯದ ಆಧಾರದ ಮೇಲೆ ತಮ್ಮದೇ ಸಾಲದ ಜವಾಬ್ದಾರಿಯನ್ನು ಹೊರುತ್ತಾರೆ. ಸಾಲಗಾರರ ಹೆಸರಿನಲ್ಲಿ "ಬ್ರಿಡ್ಜ್" ಅಥವಾ "ಫ್ಲೆಕ್ಸಿಬಲ್" ಸಾಲ (ಅಂದರೆ ಕಂತುಗಳನ್ನು ನಿಯಮಿತವಾಗಿ ಕಟ್ಟದಿರುವುದರಿಂದ ಉಂಟಾಗಿರುವ ಸ್ಪೆಷಲ್ ಸಾಲಗಳು!) ಇಲ್ಲದಿದ್ದಲ್ಲಿ ತಮ್ಮ ಉಳಿತಾಯವನ್ನು ಅವರು ವಾಪಸ್ಸು ಪಡೆಯಲೂ ಬಹುದು. ಪ್ರತೀ ಗ್ರಾಹಕಳೂ ಒಂದು ವ್ಯಕ್ತಿ, ಆ ವ್ಯಕ್ತಿಗೆ ತನ್ನದೇ ಲಾವಾದೇವಿಯ ಚರಿತ್ರೆಯಿದೆ ಅನ್ನುವುದನ್ನು ಈ ಹೊಸ ಪದ್ಧತಿ ಗುರುತಿಸುತ್ತದೆ. ಉಳಿತಾಯ ಮಾಡುವವರು - ಸಾಲ ಪಡೆವವರು ಎಂದು ಎರಡು ಭಿನ್ನ ಪೆಟ್ಟಿಗೆಗಳಲ್ಲಿ ಗ್ರಾಹಕರನ್ನು ನೋಡದೇ, ಆಗಾಗ ಉಳಿಸುವ, ಆಗಾಗ ಸಾಲ ಪಡೆವ ವ್ಯಕ್ತಿಗಳಂತೆ ನೋಡುವುದರಲ್ಲಿಯೇ ಗ್ರಾಮೀಣ-2 ಪದ್ಧತಿಯ ಪ್ರಾಮುಖ್ಯತೆಯಿದೆ. ಹೀಗಾಗಿ ತ್ವರಿತಗತಿಯಲ್ಲಿ ಬೆಳೆವವರು ಗುಂಪಿನ ಮಿಕ್ಕ ಸದಸ್ಯರ ಮಟ್ಟಕ್ಕೇ ಕಟ್ಟುಬೀಳುವ ಅವಶ್ಯಕತೆಯಿಲ್ಲ. ಎಲ್ಲಕ್ಕಿಂತ ಮುಖ್ಯವಾದ ಬದಲಾವಣೆ - ವಾರದ ಸಭೆಯಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಿದ್ದ ರೂಢಿಯ ಬಗೆಗಿನದು. ಮುಂಚೆ, ಮಿಲಿಟರಿ ಕವಾಯತಿನಂತೆ ಐದು ಜನರ ಗುಂಪು ಒಂದು ಸಾಲಿನಲ್ಲಿ, ಹಾಗೂ ಈ ಇಂಥ ಎಂಟು ಗುಂಪುಗಳು ಒಂದು ಗುಂಪಿನ ಹಿಂದೆ ಮತ್ತೊಂದು ಗ್ರಾಮೀಣ್ ಸಂಸ್ಥೆಯ ಉದ್ಯೋಗಿಯ ಎದುರು ಕುಳಿತುಕೊಳ್ಳುತ್ತಿದ್ದರೆ, ಈಗ ದೊಡ್ಡ ಕಂಪನಿಗಳ ಬೋರ್ಡ್ ರೂಂನಲ್ಲಿ ಇರುವ ಕುದುರೆಯ ಲಾಳದ ಆಕಾರದಲ್ಲಿ ಅವರು ಕುಳಿತುಕೊಳ್ಳುತ್ತಾರೆ. ಆ ಸಂಸ್ಥೆ ಬೆಳೆದು ಬಂದ ರೀತಿಗೆ ಇದೊಂದು ಪ್ರಭಾವೀ ಚಿನ್ಹೆ ಎಂದೇ ಹೇಳಬಹುದು. ಇದಲ್ಲದೇ ಸಾಲ ಮರುಪಾವತಿಯಾಗದಿದ್ದಲ್ಲಿ ಆ ನಷ್ಟವನ್ನು ಭರಿಸಲು ಇತರ ಸೂತ್ರಗಳನ್ನು ಅಳವಡಿಸಲಾಗಿದೆ. ಸಾಲಗಾರರ ಸಾವು ಉಂಟಾದರೆ ಅದಕ್ಕೂ ಇನ್ಶೂರೆನ್ಸ್ ಪದ್ಧತಿಯನ್ನು ಅಳವಡಿಸಲಾಗಿದೆ. ಈ ಎಲ್ಲ ಬದಲಾವಣೆಯಲ್ಲೂ ಹೇರಿಕೆಯ ಅಂಶಗಳನ್ನು ಇಲ್ಲವಾಗಿಸಿ ಸ್ವಯಂ-ಪ್ರೇರಣೆಗೆ ಒತ್ತು ಕೊಟ್ಟಿರುವುದು ಗಮನಿಸಬೇಕಾದ ವಿಷಯ.

ಗ್ರಾಮೀಣ್-೨ ನಮಗೆ ಹೇಳುವುದು ಒಂದು ಕಿರುಸಾಲದ ಸಂಸ್ಥೆ ಬೆಳೆದು ಘನವಾಗಿ ಒಂದು ಲಘುವಿತ್ತ ಸಂಸ್ಥೆಯಾದ ಕಥೆಯನ್ನು. ಗ್ರಾಹಕರ ಸಾಲ ಮರುಪಾವತಿಗೆ ಬೇಕಾದ ಅನೇಕ ಅಂಶಗಳನ್ನು ತನ್ನ ಹೊಸ ರೂಪದಲ್ಲಿ ಗ್ರಾಮೀಣ್ ಅಳವಡಿಸಿದೆಯಲ್ಲದೇ ಗ್ರಾಹಕರ ವಿತ್ತಸ್ಥಿತಿ ಉತ್ತಮಗೊಳ್ಳುವತ್ತಲೂ ಅವರ ಮೂಲಭೂತ ಇಡಿಗಂಟು ಹೆಚ್ಚುವತ್ತಲೂ ಅದು ಒತ್ತು ನೀಡಿದೆ. ಪೆನ್ಷನ್ ಪದ್ಧತಿ ಮತ್ತು ಉಳಿತಾಯದ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಅವಕಾಶವನ್ನೂ ಅದು ಬಡವರಿಗೆ ಒದಗಿಸಿಕೊಡುತ್ತಿದೆ. 

ಗ್ರಾಮೀಣ್‌-೨ರಲ್ಲಿ ಆಗಿರುವ ಮಹತ್ವದ ಬದಲಾವಣೆಯೆಂದರೆ ಅವರು ತಮ್ಮ ಸದಸ್ಯರಲ್ಲದವರಿಂದಲೂ ಠೇವಣಿಗಳನ್ನು ಸಂಗ್ರಹಿಸಲು ಆರಂಭಿಸಿರುವುದು. ಈ ಸಂಸ್ಥೆ ಈಗ ನಿಜಕ್ಕೂ ಬ್ಯಾಂಕ್ ಆಗಿದೆ ಅನ್ನುವುದಕ್ಕೆ ಇದು ಅಂತಿಮ ಪುರಾವೆ. ಜನರಿಂದ ಠೇವಣಿಗಳನ್ನು ಸಂಗ್ರಹಿಸುವ ಸಂಸ್ಥೆ ತನ್ನನ್ನು ಹೆಚ್ಚಿನ ಪರಿಶೀಲನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಆದರೆ ಬರೇ ಸಾಲದ ಯಂತ್ರವಾಗಿದ್ದ ಗ್ರಾಮೀಣ್ ಸಂಸ್ಥೆ ಹೀಗೆ ವಿಕಾಸಗೊಂಡಿರುವುದು ಒಳ್ಳೆಯ ಸುದ್ದಿಯೆಂದೇ ಹೇಳಬೇಕು. ಎರಡನೆಯ ಹಂತದ ಕಲಿಕೆಗೆ ಈಗ ಗ್ರಾಮೀಣ್ ಸಿದ್ಧವಾಗಬೇಕು. ಯೂನಸ್‌ಗೆ ನೊಬೆಲ್ ಬಂದಿರುವುದರಿಂದ ಗ್ರಾಮೀಣ್ ಸಂಸ್ಥೆಯನ್ನು ಇನ್ನೂ ಹತ್ತಿರದಿಂದ ಈಗ [ಗ್ರಾಮೀಣ್ ಅಭಿಮಾನಿಗಳೂ, ವಿಮರ್ಶಕರೂ ಒಳಗೊಂಡಂತೆ] ಪ್ರಪಂಚವೇ ಪರಿಶೀಲಿಸುವುದು. ಇದಕ್ಕೆ ಆ ಸಂಸ್ಥೆ ತಯಾರಾಗಬೇಕು. 

ಗ್ರಾ
ಮೀಣ್-೨ ಬಗೆಗಿನ ಪುಸ್ತಕ ಈ ಬದಲಾವಣೆಗಳನ್ನು ಹೇಗೆ ಕಾರ್ಯಗತ ಮಾಡಲಾಯಿತು ಅನ್ನುವುದರ ವಿವರವಾದ ಗಾಥೆ. ನಿಜಕ್ಕೊ ಈಗ ಗ್ರಾಮೀಣ್ ತನ್ನ ಹೆಸರಾದ ಗ್ರಾಮೀಣ್ "ಬ್ಯಾಂಕ್" ಎಂದು ಕರೆಯಿಸಿಕೊಳ್ಳುವುದಕ್ಕೆ ಅರ್ಹತೆ ಪಡೆದಿದೆ.